ADVERTISEMENT

ಸಿಪಿಐ(ಎಂ) ತಾಲ್ಲೂಕು ಘಟಕದ ಸಮ್ಮೇಳನ- ಶೋಷಿತರ ಪರ ನಿರಂತರ ಹೋರಾಟ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 6:22 IST
Last Updated 30 ನವೆಂಬರ್ 2021, 6:22 IST
ಹೊಸಕೋಟೆಯಲ್ಲಿ ನಡೆದ ಸಿಪಿಐ(ಎಂ) ತಾಲ್ಲೂಕು ಸಮಾವೇಶದಲ್ಲಿ ಪಕ್ಷದ ಮುಖಂಡರಾದ ಹರೀಂದ್ರ, ವರಲಕ್ಷ್ಮಿ, ಮನೋಹರ್‌ ಪಾಲ್ಗೊಂಡಿದ್ದರು
ಹೊಸಕೋಟೆಯಲ್ಲಿ ನಡೆದ ಸಿಪಿಐ(ಎಂ) ತಾಲ್ಲೂಕು ಸಮಾವೇಶದಲ್ಲಿ ಪಕ್ಷದ ಮುಖಂಡರಾದ ಹರೀಂದ್ರ, ವರಲಕ್ಷ್ಮಿ, ಮನೋಹರ್‌ ಪಾಲ್ಗೊಂಡಿದ್ದರು   

ಹೊಸಕೋಟೆ: ‘ಪಕ್ಷವು ದುಡಿಯುವ ವರ್ಗ, ಶೋಷಿತರು, ರೈತರು ಹಾಗೂ ದಲಿತರ ಪರವಾಗಿ ದಶಕಗಳಿಂದ ಕೆಲಸ ಮಾಡುತ್ತಾ ಬರುತ್ತಿದೆ. ತಾಲ್ಲೂಕಿನಲ್ಲಿ ವಿವಿಧ ಸಂಘಟನೆಗಳ ಜೊತೆಗೂಡಿ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿ ಶೋಷಿತರಿಗೆ ಕಾನೂನಾತ್ಮಕವಾಗಿ ನ್ಯಾಯ ಕೊಡಿಸಲು ಬದ್ಧವಾಗಿದೆ’ ಎಂದು ಸಿಪಿಐ(ಎಂ) ಜಿಲ್ಲಾ ಮುಖಂಡ ಹರೀಂದ್ರ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ಸಿಪಿಐ(ಎಂ) ತಾಲ್ಲೂಕು ಘಟಕದ 4ನೇ ವರ್ಷದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಮ್ಮದು ಜನಪರ ಕಾಳಜಿವಹಿಸಿ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುವ ಏಕೈಕ ರಾಜಕೀಯ ಪಕ್ಷ. ದೇಶದ ಯಾವುದೇ ಮೂಲೆಯಲ್ಲಿ ಜನರಿಗೆ ಅನ್ಯಾಯವಾದರೂ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಜನರಿಗೆ ನ್ಯಾಯ ದೊರಕುವವರೆಗೂ ಹೋರಾಟ ನಡೆಸಲಿದ್ದು, ಹಿಂದೆ ಸರಿಯುವುದಿಲ್ಲ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ವರಲಕ್ಷ್ಮಿ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶ. ಇಲ್ಲಿಯವರೆಗೂ ರೈತರಿಗೆ ಸಂಪೂರ್ಣ ಬೆಂಬಲ ನೀಡುವುದರಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳು ಕಳ್ಳಾಟವಾಡಿವೆ ಎಂದು ಟೀಕಿಸಿದರು.

ರೈತರು ಬೆಳೆದ ಎಲ್ಲಾ ಬೆಳೆಗಳಿಗೂ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು. ಅದನ್ನು ಹೊರತುಪಡಿಸಿ ಕೃಷಿ ಕಾಯ್ದೆಗಳ ತಿದ್ದುಪಡಿ ಮೂಲಕ ಕೃಷಿ ಕ್ಷೇತ್ರವನ್ನು ಖಾಸಗೀಕರಣ ಮಾಡಿ ರೈತರನ್ನು ಕಾರ್ಮಿಕರನ್ನಾಗಿ ಮಾಡುವ ಹುನ್ನಾರ ನಡೆಯುತ್ತಿವೆ. ಸರ್ಕಾರಗಳು ಹಣವಂತರ ಕೈಗೊಂಬೆಗಳಂತೆ ನಡೆದುಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ದೇಶದಲ್ಲಿ ಜನರಿಗೆ ಕೆಲಸವಿಲ್ಲ. ರೈತರು ಕೃಷಿ ಮಾಡಲಾಗುತ್ತಿಲ್ಲ. ಸರ್ಕಾರಗಳು ದಿನಬಳಕೆ ವಸ್ತುಗಳು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಹೆಚ್ಚಿಸಿವೆ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು 11 ತಿಂಗಳ ಕಾಲ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುವಂತೆ ಮಾಡಿದರು ಎಂದರು.

ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ತೇಜಸ್ವಿ ಮಾತನಾಡಿ, ಕೇಂದ್ರ ಸರ್ಕಾರ ಹಣವಂತರ ಕಪಿಮುಷ್ಠಿಯಲ್ಲಿ ಸಿಲುಕಿದೆ. ರೈಲ್ವೆ, ಬ್ಯಾಂಕ್, ವಿದ್ಯುತ್, ವಿಮಾ ಕ್ಷೇತ್ರ ಸೇರಿದಂತೆ ಎಲ್ಲವನ್ನೂ ಖಾಸಗೀಕರಣಗೊಳಿಸಲು ಹೊರಟಿದೆ. ಇದರಿಂದ ಜನತೆ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ದೂರಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಮನೋಹರ್‌, ಮೋಹನ್ ಬಾಬು, ಬೆಂಗಾಲ್ ಲ್ಯಾಂಪ್ಸ್‌ನ ಕಾರ್ಮಿಕ ಮುಖಂಡ ಕ್ಯಾಸೆಟ್ ನಾಗರಾಜ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಸಾಬ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.