ಸೂಲಿಬೆಲೆ: ‘ಕೊಳಕಿನಿಂದ ನಾನಾ ರೋಗ ರುಜಿನಗಳಿಗೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ಅಕ್ಸೊನೊಬೆಲ್ ಕಂಪನಿ ಹಿರಿಯ ವ್ಯವಸ್ಥಾಪಕ ಓಸ್ವಾಲ್ ಅಭಿಪ್ರಾಯಪಟ್ಟರು.
ಹೊಸಕೋಟೆ ತಾಲ್ಲೂಕಿನ ದೊಡ್ಡಹುಲ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಸೊನೋಬೆಲ್ ಕಂಪನಿ ಮತ್ತು ಅಪ್ಸಾ ಸಂಸ್ಥೆ ಸಹಯೋಗದಲ್ಲಿ ₹ 1.75 ಲಕ್ಷ ವೆಚ್ಚದಲ್ಲಿ ಶೌಚಾಲಯ ನವೀಕರಣ ಉದ್ಘಾಟಿಸಿ ಮಾತನಾಡಿದರು.
‘ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ಸಿದ್ಧರಾಗಬೇಕು, ನಾವು ಆರೋಗ್ಯದಿಂದ ಇರಬೇಕು ಎಂದರೆ ಉತ್ತಮವಾದ ಆಹಾರ, ಶುದ್ಧ ನೀರು, ಗಾಳಿ ಸೇವಿಸಬೇಕು ಅದಕ್ಕೆ ಬೇಕಾದ ಶುದ್ಧ ವಾತಾವರಣವನ್ನು ನಾವೇ ಸೃಷ್ಟಿ ಮಾಡಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಾನವ ಸಂಪನ್ಮೂಲ ವ್ಯವಸ್ಥಾಪಕಿ ಶಿಲ್ಪಾ ಮಾತನಾಡಿ, ಸ್ವಚ್ಛ ಭಾರತ್ ಕಾರ್ಯಕ್ರಮದ ಮಾದರಿಯಲ್ಲಿ ಅಕ್ಸೊನೊಬೆಲ್ ಕಂಪನಿ ವತಿಯಿಂದ 1 ವರ್ಷದ ಅವಧಿಗೆ ಶಾಲೆಗಳಲ್ಲಿ ಕಾರ್ಯಕ್ರಮ ಜಾರಿ ಮಾಡಲಾಗಿದೆ. ಸ್ವಚ್ಛತೆಯನ್ನು ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಹೊಣೆ ಎಂದು ಭಾವಿಸಬೇಕು ಎಂದು ತಿಳಿಸಿದರು.
ಪ್ರತಿ ಮನೆಯಲ್ಲೂ ಕಡ್ಡಾಯವಾಗಿ ಶೌಚಾಲಯ ಹೊಂದಿರಬೇಕು. ಬಯಲು ಶೌಚ ಮುಕ್ತವಾಗಬೇಕು. ಸಮಾಜದಲ್ಲಿ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ನಾಯಕತ್ವ ವಹಿಸಿಕೊಳ್ಳಬೇಕು ಎಂದರು.
ಮುಖ್ಯ ಶಿಕ್ಷಕ ಶಿವಪ್ರಸಾದ್ ಮಾತನಾಡಿ, ಈ ವರ್ಷದಲ್ಲಿ ಶೌಚಾಲಯ ನವೀಕರಣ ಮಾಡಿಕೊಟ್ಟಿದ್ದು, ಮುಂದಿನ ವರ್ಷದಲ್ಲಿ ಅಕ್ಸೊನೊಬೆಲ್ ಮತ್ತು ಅಪ್ಸಾ ಸಂಸ್ಥೆಯವರು ಶಾಲೆಗೆ ಗ್ರಂಥಾಲಯ ನಿರ್ಮಾಣ ಮಾಡಿಕೊಡಲಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.