ವಿಜಯಪುರ: ಹೋಬಳಿಯ ಕೋರಮಂಗಲದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ ನಿರ್ಮಿತಿ ಕೇಂದ್ರದಿಂದ ₹15 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಗ್ರಂಥಾಲಯ ಕಟ್ಟಡದ ಕಾಮಗಾರಿ ನಿಂತಿದ್ದು ತ್ವರಿತವಾಗಿ ಆರಂಭಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರವರಿಂದ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಲಿಂಟಲ್ ಹಂತದವರೆಗೂ ನಿರ್ಮಾಣ ಮಾಡಿದ್ದಾರೆ. ಒಳಗೆ ಮೆಟ್ಟಿಲು ನಿರ್ಮಾಣ ಮಾಡಲು ಕಂಬಿ ಕಟ್ಟಿ ಬಿಟ್ಟುಬಿಟ್ಟಿದ್ದಾರೆ. ಇದರಿಂದ ಸರ್ಕಾರದ ಅನುದಾನ ವ್ಯರ್ಥವಾಗಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೆಟ್ಟಿಲುಗಳು ಹೊರಗಡೆ ಅಳವಡಿಸಬೇಕು ಎನ್ನುವ ಕಾರಣಕ್ಕಾಗಿ ಕಾಮಗಾರಿಯನ್ನು ನಿಲ್ಲಿಸಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಕಟ್ಟಡದ ಜೊತೆಯಲ್ಲೆ ಆರಂಭವಾದ ವೆಂಕಟಗಿರಿಕೋಟೆಯ ಗ್ರಂಥಾಲಯ ಉದ್ಘಾಟನೆಗೊಂಡು ಅಲ್ಲಿನ ಜನರಿಗೆ ಉಪಯೋಗವಾಗುತ್ತಿದೆ. ಇಲ್ಲಿ ಕಾಮಗಾರಿಯನ್ನೇ ನಿಲ್ಲಿಸಲಾಗಿದೆ. ಇರುವ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ಆರಂಭಿಸಿ ಜನರಿಗೆ ಅನುಕೂಲ ಮಾಡಿಕೊಡುವುದು ಬಿಟ್ಟು ಸಾರ್ವಜನಿಕ ಸೇವೆಯಲ್ಲಿ ರಾಜಕೀಯಕ್ಕೆ ಅವಕಾಶ ಮಾಡಿಕೊಡುವುದು ಸರಿಯಲ್ಲ ಎಂದು ಸ್ಥಳೀಯ ನಿವಾಸಿ ರವಿಚಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕಿ ಸರೋಜಮ್ಮ ಮಾತನಾಡಿ, ‘ನಮ್ಮ ಇಲಾಖೆಯ ಯೋಜನೆಯ ಪ್ರಕಾರವೇ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ಈಗಿನ ಯೋಜನೆ ಸರಿಯಾಗಿಲ್ಲ. ಅದನ್ನು ಬದಲಾವಣೆ ಮಾಡಿ ಕೆಲಸ ಮಾಡಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಪತ್ರ ನೀಡಿದ್ದಾರೆ. ಶಾಸಕರ ಪತ್ರದಂತೆ ಹೊಸ ಯೋಜನೆ ಅನುಮೋದನೆಯಾದ ಕೂಡಲೇ ಕಾಮಗಾರಿ ಪುನಃ ಆರಂಭಿಸಿ, ಪೂರ್ಣಗೊಳಿಸುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.