
ವಿಜಯಪುರ ಪಟ್ಟಣದ ಸಮೀಪದ ಮಂಡಿಬಲೆ ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರ ಕಡಿದಿರುವುದು
ವಿಜಯಪುರ (ದೇವನಹಳ್ಳಿ): ಪಟ್ಟಣಕ್ಕೆ ಹೊಂದಿಕೊಂಡಿರುವ ಮಂಡಿಬೆಲೆ ಅರಣ್ಯ ಪ್ರದೇಶ ಮುಖ್ಯದ್ವಾರದಲ್ಲಿ ಮಂಗಳವಾರ ರಾತ್ರಿ ನೂರಕ್ಕೂ ಹೆಚ್ಚು ನೀಲಗಿರಿ ಹಾಗೂ ಇತರ ಮರಗಳನ್ನು ಕಡಿದು ವಾಹನದಲ್ಲಿ ಸಾಗಿಸುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಮರಗಳನ್ನು ಕಡಿದು ಸಾಗಿಸುತ್ತಿರುವ ಬಗ್ಗೆ ಸುಳಿವು ದೊರೆತ ಕೂಡಲೇ ಕಾರ್ಯಾಚರಣೆಗೆ ಇಳಿದ ಆರ್ಎಫ್ಓ ನಾಗಾರ್ಜುನ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಮರದ ತುಂಡುಗಳನ್ನು ವಶಪಡಿಸಿಕೊಂಡರು.
ಮರ ಕಡಿದು ವಾಹನಕ್ಕೆ ಲೋಡು ಮಾಡುತ್ತಿದ್ದ ನಾಗಮಂಗಲದ ಮುನಿನಾರಾಯಣಪ್ಪ, ವಿಜಯಪುರದ ಮಂಜುನಾಥ್, ಬೀಡಗಾನಹಳ್ಳಿ ಮಂಜುನಾಥ್, ನಡಪಿನಾಯಕನಹಳ್ಳಿ ನಾಗರಾಜು ಎಂಬುವರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಅರಣ್ಯ ಪ್ರದೇಶ ಮುಖ್ಯದ್ವಾರದಲ್ಲಿ ಅರಣ್ಯ ರಕ್ಷಕರಿಗೆ, ಅಧಿಕಾರಿಗಳು ಸಭೆ ನಡೆಸಲು, ತಂಗಲು ಕಟ್ಟಡ ನಿರ್ಮಿಸಲಾಗಿದೆ. ಇದರ ಬಳಿಯ ಮರಗಳನ್ನು ಕಡಿದು ವಾಹನಕ್ಕೆ ತುಂಬಲಾಗುತ್ತಿತ್ತು.
ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿರುವ ಮರಗಳ್ಳನೊಬ್ಬ ವಿಚಾರಣೆ ವೇಳೆ ಅರಣ್ಯ ರಕ್ಷಕರೊಬ್ಬರ ಹೆಸರು ಬಾಯ್ಬಿಟ್ಟಿದ್ದಾನೆ.
ಮರ ಕಡಿದವರನ್ನು ವಶಕ್ಕೆ ಪಡೆದು, ವಾಹನ ಸಮೇತ ಜಪ್ತಿ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದೇವೆ. ಮರಗಳ್ಳರಿಗೆ ನೆರವು ನೀಡುತ್ತಿದ್ದ ಅರಣ್ಯ ರಕ್ಷಕರೊಬ್ಬರ ವಿರುದ್ಧ ಕೇಳಿ ಬಂದಿರುವ ಆರೋಪ ಕುರಿತು ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಆರ್ ಎಫ್ ಓ ನಾಗರ್ಜುನ ತಿಳಿಸಿದ್ದಾರೆ.
ಮಂಡಿಬೆಲೆ ಬಳಿ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿದ್ದೇವೆ. ಇದಕ್ಕಾಗಿ ಈ ರೀತಿಯ ಸುಳ್ಳು ಆರೋಪ ಮಾಡಲಾಗುತ್ತಿದೆ.ಬೀರೇಶ ಅರಣ್ಯ ರಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.