ADVERTISEMENT

ಪಿಂಚಣಿ ಪಡೆಯಲು ಅಲೆದಾಟ

​ಪ್ರಜಾವಾಣಿ ವಾರ್ತೆ
Published 10 ಮೇ 2019, 13:29 IST
Last Updated 10 ಮೇ 2019, 13:29 IST
ವಿಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದ ವೃದ್ಧೆ ಚಿಕ್ಕೀರಮ್ಮ ಪಿಂಚಣಿಗಾಗಿ ತಾಲ್ಲೂಕು ಕಚೇರಿಯ ಮೆಟ್ಟಿಲು ಹತ್ತುತ್ತಿರುವುದು 
ವಿಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದ ವೃದ್ಧೆ ಚಿಕ್ಕೀರಮ್ಮ ಪಿಂಚಣಿಗಾಗಿ ತಾಲ್ಲೂಕು ಕಚೇರಿಯ ಮೆಟ್ಟಿಲು ಹತ್ತುತ್ತಿರುವುದು    

ವಿಜಯಪುರ: ‘ಸರ್ಕಾರ ಜಾರಿಗೆ ತಂದಿರುವ ಪಿಂಚಣಿ ಯೋಜನೆಯ ಲಾಭ ನಮಗೆ ಸರಿಯಾಗಿ ಸಿಗುತ್ತಿಲ್ಲ. ನನ್ನ ಪಿಂಚಣಿ ಹಣವನ್ನು ನನ್ನ ಬ್ಯಾಂಕ್ ಖಾತೆಗೆ ಕಳುಹಿಸಿಕೊಡಿ ಸ್ವಾಮಿ ಎಂದು ಎಷ್ಟು ಬಾರಿ ದಾಖಲೆ ಒದಗಿಸಿದರು ಖಜಾನೆ ಅಧಿಕಾರಿಗಳು ಇದುವರೆಗೂ ಈ ಬಗ್ಗೆ ಗಮನ ಹರಿಸಿಲ್ಲ. ಪದೇ ಪದೇ ತಾಲ್ಲೂಕು ಕಚೇರಿಗೆ ಅಲೆದಾಡಿಸುತ್ತಿದ್ದಾರೆ’ ಎಂದು ಹಾರೋಹಳ್ಳಿ ಗ್ರಾಮದ ಚಿಕ್ಕೀರಮ್ಮ ಅಳಲು ತೋಡಿಕೊಂಡರು.

‘ನನಗೆ ಸರಿಯಾಗಿ ಪಿಂಚಣಿ ಬರುತ್ತಿಲ್ಲ. ಇತ್ತಿಚೆಗೆ ಅನಾರೋಗ್ಯಕ್ಕೆ ಒಳಗಾಗಿ ತುಂಬಾ ಕಷ್ಟಪಡುತ್ತಿದ್ದೇನೆ. ಆಸ್ಪತ್ರೆ ಖರ್ಚಿಗು ನಯಾ ಪೈಸೆ ಇಲ್ಲ. ಪಿಂಚಣಿಯಾದರೂ ಬಂದರೆ ಅನುಕೂಲವಾಗುತ್ತದೆ ಎಂದು ಮೂರು ಬಾರಿ ಬಂದು ಟ್ರಜರಿಯಲ್ಲಿ ಕೇಳಿದ್ದೆ.ತಾಲ್ಲೂಕು ಕಚೇರಿಯ ಮೇಲಂತಸ್ತಿನಲ್ಲಿರುವ ಖಜಾನೆಗೆ ಹೋಗಲು ಮೆಟ್ಟಿಲು ಹತ್ತಲು ನನ್ನಿಂದ ಆಗುವುದಿಲ್ಲ. ಆದರೆ ಅವರು ನಿಮ್ಮ ಪೋಸ್ಟ್ ಆಫೀಸಿಗೆ ಹೋಗಿದೆ ಎಂದು ಸಮಜಾಯಿಷಿ ನೀಡುತ್ತಾರೆ’ ಎಂದು ನೋವಿನಿಂದ ಹೇಳಿದರು.

‘ಅನಾರೋಗ್ಯದಿಂದ ಮಗಳ ಮನೆಯಲ್ಲಿದ್ದೇನೆ. ಸರಿಯಾದ ಸಮಯಕ್ಕೆ ಪಿಂಚಣಿ ತಲುಪುತ್ತಿಲ್ಲ. ಕಚೇರಿಗೆ ಎರಡು ಬಾರಿ ಬಂದು ಪಿಂಚಣಿ ಮಂಜೂರಾಗಿರುವ ಆದೇಶಪತ್ರಗಳು, ಆಧಾರ್‌ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಎಲ್ಲವನ್ನು ಕೊಟ್ಟು ಹೋಗಿದ್ದೆ. ಇದುವರೆಗೂ ನನ್ನ ಖಾತೆಗೆ ಪಿಂಚಣಿ ಜಮಾ ಆಗಿಲ್ಲ. ಪುನಃ ಇವತ್ತೂ ಬಂದಿದ್ದೇನೆ’ ಎಂದು ಹೇಳಿದರು.

ಮುಖಂಡ ರಾಜಶೇಖರ್ ಮಾತನಾಡಿ ‘ತಾಲ್ಲೂಕಿನಲ್ಲಿ ಬಹುಪಾಲು ವೃದ್ಧರದ್ದು ಇದೇ ಪರಿಸ್ಥಿತಿ. ನಿಗದಿತ ಸಮಯಕ್ಕೆ ಅವರಿಗೆ ಪಿಂಚಣಿ ಲಭಿಸುತ್ತಿಲ್ಲ. ಗ್ರಾಮಲೆಕ್ಕಾಧಿಕಾರಿಗಳು ಇಂತಹವರ ಮಾಹಿತಿ ಪಡೆದು ಪಿಂಚಣಿಯುನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.