ADVERTISEMENT

‘ಹಿಂದುಳಿದ ಸಮುದಾಯ ಸಂಘಟಿತರಾಗಬೇಕು’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 3:46 IST
Last Updated 13 ಸೆಪ್ಟೆಂಬರ್ 2021, 3:46 IST
ಮಾಗಡಿಯಲ್ಲಿ ನಡೆದ ತಾಲ್ಲೂಕು ಬಿಜೆಪಿ ಒಬಿಸಿ ಮೋರ್ಚಾ ಸಭೆಯಲ್ಲಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ನೆ.ಲ. ನರೇಂದ್ರಬಾಬು ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಎ.ಎಚ್‌. ಬಸವರಾಜು ಹಾಜರಿದ್ದರು
ಮಾಗಡಿಯಲ್ಲಿ ನಡೆದ ತಾಲ್ಲೂಕು ಬಿಜೆಪಿ ಒಬಿಸಿ ಮೋರ್ಚಾ ಸಭೆಯಲ್ಲಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ನೆ.ಲ. ನರೇಂದ್ರಬಾಬು ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಎ.ಎಚ್‌. ಬಸವರಾಜು ಹಾಜರಿದ್ದರು   

ಮಾಗಡಿ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಒಬಿಸಿ ಸಮುದಾಯವನ್ನು ಮತ ಬ್ಯಾಂಕ್ ಮಾಡಿಕೊಂಡಿದ್ದು ಬಿಟ್ಟರೆ ಸಮುದಾಯದ ಅಭಿವೃದ್ಧಿಗೆ ಮುಂದಾಗಲಿಲ್ಲ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ನೆ.ಲ. ನರೇಂದ್ರಬಾಬು ಟೀಕಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ತಾಲ್ಲೂಕು ಒಬಿಸಿ ಮೋರ್ಚಾ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಶೇ 55ರಷ್ಟು ಒಬಿಸಿ ಸಮುದಾಯಗಳಿವೆ. ಮೊದಲ ಬಾರಿಗೆ ಬಿಜೆಪಿ ಒಬಿಸಿಗೆ ಸೇರಿರುವ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿದೆ. ಕೇಂದ್ರ ಸಂಪುಟದಲ್ಲಿ ಹಿಂದುಳಿದ ಸಮುದಾಯಕ್ಕೆ ಸೇರಿದ ಹೆಚ್ಚಿನ ಸಂಖ್ಯೆಯ ಸಚಿವರಿದ್ದಾರೆ ಎಂಬುದನ್ನು ಮರೆಯಬಾರದು ಎಂದರು.

ADVERTISEMENT

ಬಿಜೆಪಿ ಮಾತ್ರ ಒಬಿಸಿ ಸಮುದಾಯಗಳಿಗೆ ಸವಲತ್ತು ನೀಡಿ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಿದೆ. ತಾಲ್ಲೂಕಿನಲ್ಲಿ ಶೇ 53ರಷ್ಟು ಹಿಂದುಳಿದ ಸಮುದಾಯದ ಮತದಾರರಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಚುನಾವಣೆ ಸಮಯದಲ್ಲಿ ಈ ಸಮುದಾಯಗಳಿಗೆ ಆಸೆ ತೋರಿಸಿ ಮತಗಳಿಸುತ್ತಾರೆ. ಅಧಿಕಾರಕ್ಕೆ ಬಂದ ಕೂಡಲೇ ಸ್ವಜಾತಿಗಳಿಗೆ ಸವಲತ್ತು ನೀಡುವುದನ್ನು ಒಬಿಸಿ ಯುವಕರು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.

ಹಿಂದುಳಿದ ಸಮುದಾಯದ ಯುವಕರು ಸಂಘಟಿತರಾಗಿ, ಸರ್ಕಾರಿ ಸವಲತ್ತು ಪಡೆಯಲು ಮುಂದಾಗಬೇಕು. ಹಿಂದುಳಿದವರು ಎಂದು ಮನೆಯಲ್ಲಿ ಕುಳಿತರೆ ಮನೆ ಬಾಗಿಲಿಗೆ ಸವಲತ್ತು ದೊರೆಯುವುದಿಲ್ಲ. ಮನೆಯಿಂದ ಹೊರಗೆ ಬಂದು ಸಂಘಟಿತರಾಗಬೇಕು. ಒಬಿಸಿ, ಅಲೆಮಾರಿ, ಅರೆಅಲೆಮಾರಿ ಜನಾಂಗದ ಯುವಕರು ಸಂಘಟಿತರಾಗಿ ಜನಜಾಗೃತಿ ಮೂಡಿಸಬೇಕು. ಜೊತೆಗೆ, ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಎ.ಎಚ್. ಬಸವರಾಜು, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಮುಖಂಡರಾದ ಗೀತಾ ಸುರೇಶ್, ಶಿವಣ್ಣ, ಭಾಸ್ಕರ್, ಮಾರಯ್ಯ ದೊಂಬಿದಾಸ, ರಾಘವೇಂದ್ರ ನೇಕಾರ, ಕೃಷ್ಣಪ್ಪ, ಸುರೇಶ್‌, ಕುದೂರಿನ ಹೇಮಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.