ಹೊಸಕೋಟೆ: ‘ವಾಲ್ಮೀಕಿ ಕೇವಲ ಒಂದು ಜಾತಿಗೆ ಸೀಮಿತರಲ್ಲ. ಆಧ್ಯಾತ್ಮಿಕ ಮತ್ತು ಜೀವನ ಮೌಲ್ಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ’ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ವಾಲ್ಮೀಕಿ ಸಮಾಜದಿಂದ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ಯೋಗ್ಯತೆಗೆ ತಕ್ಕಂತೆ ವರ್ಣಗಳು ಹುಟ್ಟಿವೆಯೇ ಹೊರತು ಜನ್ಮದಿಂದಲ್ಲ. ಇದನ್ನು ಸತ್ಯ ಮಾಡಿ ಜಗತ್ತಿಗೆ ಸಾರಿದ ಮಹಾಪುರುಷ ಮಹರ್ಷಿ ವಾಲ್ಮೀಕಿ ಎಂದು ಬಣ್ಣಿಸಿದರು.
ಪ್ರಪಂಚದ ಯಾವುದೇ ತತ್ವಜ್ಞಾನಿಯಿಂದಲೂ ಬರೆಯಲಾಗದ ಸಂಪೂರ್ಣ ರಾಮಾಯಣವನ್ನು ವಾಲ್ಮೀಕಿ ತಮ್ಮ ಅಪಾರ ಜ್ಞಾನ ಮತ್ತು ವಿದ್ವತ್ ಸಂಪತ್ತಿನಿಂದ ಬರೆದಿದ್ದಾರೆ ಎಂದರು.
ತಹಶೀಲ್ದಾರ್ ಗೀತಾ, ‘ಪ್ರಧಾನಿ ನೆಹರೂ ತಿಳಿಸಿರುವಂತೆ ಪ್ರಪಂಚದಲ್ಲಿ ಮನುಷ್ಯನ ಮೇಲೆ ಅತ್ಯಂತ ಪ್ರಭಾವ ಬೀರುವ ಮಹಾಕಾವ್ಯಗಳಲ್ಲಿ ರಾಮಾಯಣ ಮೊದಲ ಸ್ಥಾನದಲ್ಲಿದೆ. ಅದನ್ನು ಬರೆದ ವಾಲ್ಮೀಕಿ ಅವರ ಆದರ್ಶಗಳನ್ನು ಜೀವನದಲ್ಲಿ ಪ್ರತಿನಿತ್ಯ ನೆನೆಯಬೇಕು’ ಎಂದು
ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀನಾಥ್ ಗೌಡ, ಸದಸ್ಯ ಡಿ.ಟಿ. ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ಬಿಇಒ ಕನ್ನಯ್ಯ, ವಾಲ್ಮೀಕಿ ಸಮಾಜದ ಅಧ್ಯಕ್ಷ ಹನುಮಂತರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಎಲ್ ಅಂಡ್ ಟಿ ಮಂಜುನಾಥ್. ಮುಖಂಡರಾದ ಬಂಗಾರಪ್ಪ, ನಾಗರಾಜ್, ಮುನಿರಾಜ್, ವಿಜಯ್ ಕುಮಾರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.