ದೊಡ್ಡಬಳ್ಳಾಪುರ: ಕನ್ನಡ ಸಾಹಿತ್ಯಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅನನ್ಯ. ಸಾಮಾಜಿಕ ಸಮಾನತೆಯ ದನಿಯಾಗಿ ಮಹಿಳಾ ಬರಹಗಾರರು ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಸದಸ್ಯೆ ಪ್ರಮೀಳಾ ಮಹದೇವ್ ಹೇಳಿದರು.
ನಗರದ ಶ್ರೀದೇವರಾಜ್ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಕನ್ನಡ ವಿಭಾಗ, ಮಹಿಳಾ ಕೋಶ ಹಾಗೂ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್ನ ಸಹಯೋಗದಲ್ಲಿ ಮಹಿಳಾ ಸಬಲೀಕರಣದ ಆಶಯದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಮತ್ತು ಮಹಿಳಾ ಸಾಹಿತಿಗಳ ಅವಲೋಕನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಚನಕಾರ್ತಿ ಅಕ್ಕಮಹಾದೇವಿಯಿಂದ ಮೊದಲುಗೊಂಡು ಇತ್ತೀಚಿನ ಮಹಿಳಾ ಸಾಹಿತಿಗಳವರೆಗೆ ಕನ್ನಡದಲ್ಲಿ ಬಹುದೊಡ್ಡ ಸ್ತ್ರೀ ಸಂವೇದನೆಯ ಸಾಹಿತ್ಯ ಪರಂಪರೆ ಇದೆ ಎಂದರು.
ಲಯನ್ಸ್ ಜಿಲ್ಲೆ 317ರ ಎಫ್ಡಬ್ಲ್ಯೂಎಸ್ ಸಂಯೋಜಕ ಬಿ.ಎನ್.ದೇವತಾ, ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯ ಆಶೋತ್ತರಗಳು ಬದಲಾಗಿವೆ. ಸವಾಲು, ದೌರ್ಜನ್ಯ ಮತ್ತು ಶೋಷಣೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅವುಗಳಿಂದ ಮುಕ್ತವಾಗುವ ಚಿಂತನೆಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಬಗ್ಗೆ ಜಾಗರೂಕ ನಿಲುವು ಅತ್ಯಂತ ಅಗತ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಆರ್.ನಾಗರಾಜ್, ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ವಲಯ ಅಧ್ಯಕ್ಷ ಜೆ.ಆರ್.ರಾಕೇಶ್, ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್ಕುಮಾರ್, ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಂ.ಚಿಕ್ಕಣ್ಣ, ಉಪಪ್ರಾಂಶುಪಾಲ ಕೆ.ದಕ್ಷಿಣಾಮೂರ್ತಿ, ಲಯನ್ಸ್ ಕಾರ್ಯದರ್ಶಿ ಸುಮಾ ಪ್ರಸನ್ನ, ಖಜಾಂಚಿ ಕೆ.ಸಿ.ನಾಗರಾಜ್, ಮಹಿಳಾ ಕೋಶದ ಸಂಯೋಜಕಿ ಪಿ.ಚೈತ್ರ, ಎನ್.ದಿವ್ಯ, ವೆಂಕಟೇಶ್, ಬಾಬುಸಾಬಿ, ತಾವರೆನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.