ADVERTISEMENT

‘ಯುವ ಜನರಿಂದಲೇ ಹೆಚ್ಚು ಅಪಘಾತ’

ದೇವನಹಳ್ಳಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 14:08 IST
Last Updated 7 ಫೆಬ್ರುವರಿ 2019, 14:08 IST
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು   

ದೇವನಹಳ್ಳಿ: ಪ್ರತಿಯೊಬ್ಬ ಚಾಲಕರು ಸಾಮಾನ್ಯ ಪರಿಜ್ಞಾನ ಹೊಂದಿದ್ದರೆ ಮಾತ್ರ ಅವಘಡ ತಪ್ಪಿಸಬಹುದು ಎಂದು ರಾಜ್ಯ ಬಾರ್ ಕೌನ್ಸಿಲ್ ನಿರ್ದೇಶಕ ಹರೀಶ್ ತಿಳಿಸಿದರು.

ಪ್ರಾದೇಶಿಕ ಸಹಾಯಕ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ನಡೆದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಹನೆ ನಿನ್ನದಾದರೆ ಸಕಲವು ನಿನ್ನದೇ’ ಎಂಬಂತೆ ಚಾಲನೆಯಲ್ಲಿ ತಾಳ್ಮೆ,ಎಚ್ಚರಿಕೆ ಅಗತ್ಯ. ಇದರ ಜತೆಗೆ ರಸ್ತೆ ನಿಯಮ ಮತ್ತು ಚಿನ್ಹೆಗಳನ್ನು ಪಾಲಿಸಬೇಕೆಂದು ಕಿವಿಮಾತು ಹೇಳಿದರು.

ADVERTISEMENT

ಅನೇಕ ರಸ್ತೆಗಳು ವಿಸ್ತರಣೆಗೊಂಡಿವೆ. ಆದರೂ ಅಪಘಾತಗಳು ಸಂಭವಿಸುತ್ತಲೇ ಇವೆ. ಇದಕ್ಕೆ ಚಾಲನೆಯಲ್ಲಿ ನಿರ್ಲಕ್ಷ್ಯಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸುರಕ್ಷತಾ ನಿಯಮ ಒಂದು ತಿಂಗಳಿಗೆ ಅಲ್ಲ; ಜೀವನದ ಉದ್ದಕ್ಕೂ ಅನ್ವಯವಾಗಲಿದೆ ಎಂದು ಕಿವಿಮಾತು ಹೇಳಿದರು.

ಪುರಸಭೆ ಅಧ್ಯಕ್ಷ ಎಂ.ಮೂರ್ತಿ ಮಾತನಾಡಿ, ಅಪ್ರಾಪ್ತರಿಗೆ ಪೋಷಕರು ವಾಹನ ನೀಡಬಾರದು. ಚಾಲಕರು ವಾಹನಗಳ ಸುರಕ್ಷತೆ ಮತ್ತು ದಾಖಲೆಗಳನ್ನು ಸಕಾಲದಲ್ಲಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ಪ್ರಾದೇಶಕ ಸಾರಿಗೆ ಇಲಾಖೆ ಸಹಾಯಕಾಧಿಕಾರಿ ಮಂಜುನಾಥ್ ಮಾತನಾಡಿ, ಪ್ರಗತಿ ಹೊಂದುತ್ತಿರುವ ದೇಶದಲ್ಲಿ ಪ್ರತಿವರ್ಷ ಅಂದಾಜು 1.5ಲಕ್ಷ ಜನರು ರಸ್ತೆ ಅಪಘಾತದಲ್ಲಿ ಮೃತರಾಗುತ್ತಿದ್ದಾರೆ. ಶೇಕಡ 90 ರಷ್ಟು ಯುವ ಚಾಲಕರ ತಪ್ಪಿನಿಂದ ಅಪಘಾತ ಸಂಭವಿಸುತ್ತಿದೆ. ಈ ಬಗ್ಗೆ ಅತ್ಮಾವಲೋಕನ ಅವಶ್ಯ ಎಂದರು.

ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಕೆ, ಮದ್ಯಪಾನ, ಮೋಜಿನಿಂದಾಗಿ ಅಪಘಾತಗಳು ಸಂಭವಿಸುತ್ತಿದೆ. ತಾಳ್ಮೆ ಹಾಗೂ ಏಕಾಗ್ರತೆಯಿಂದ ಚಾಲನೆ ಮಾಡಿದರೆ ಯಾವುದೇ ಅವಘಡಕ್ಕೆ ಆಸ್ಪದವಿರುವುದಿಲ್ಲ ಎಂದು ಕಿವಿಮಾತು ಹೇಳಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷೆ ಅಶಾರಾಣಿ, ಸದಸ್ಯ ಎಂ.ಕುಮಾರ್, ಡಾ. ಶ್ರೀನಿವಾಸ್, ಮಹಿಳಾ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಸೂರ್ಯಕಲಾ, ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್‌ ನಾಗರಾಜ್, ನಿವೃತ್ತ ಶಿಕ್ಷಕ ಮಹಾಲಿಂಗಪ್ಪ, ಮೋಟಾರು ವಾಹನ ಹಿರಿಯ ನಿರೀಕ್ಷರಾದ ನರಸಿಂಹಮೂರ್ತಿ, ಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.