ಗೋಕಾಕ: ಗಡಿ ಭಾಗದ ಕನ್ನಡ–ಮರಾಠಿ ಭಾಷಿಕರಲ್ಲಿಯ ಸಾಮರಸ್ಯವನ್ನು ಕದಡಲು ನಾಡವಿರೋಧಿ ಹೇಳಿಕೆ ನೀಡುತ್ತಿರುವ ಶಿವಸೇನೆ ಮುಖ್ಯಸ್ಥ ಉದ್ಧವ ಠಾಕ್ರೆಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಇಲ್ಲಿಯ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶನಿವಾರ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ನೆರೆದಿದ್ದ ಬಣದ ಕಾರ್ಯಕರ್ತರು, ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ನಂತರ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.
ಶಿವಸೇನೆ ಮುಖ್ಯಸ್ಥ ಉದ್ಧವ ಠಾಕ್ರೆ ಬೆಳಗಾವಿ, ನಿಪ್ಪಾಣಿ ಸೇರಿದಂತೆ ಕರ್ನಾಟಕ ವ್ಯಾಪ್ತಿಯಲ್ಲಿರುವ ಮರಾಠಿ ಭೂಭಾಗ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಉದ್ಧಟತನದ ಹೇಳಿಕೆಯನ್ನು ನೀಡಿದ್ದಲ್ಲದೇ ಎಂ.ಇ.ಎಸ್ ನಡೆಸುತ್ತಿರುವ ಗಡಿಹೋರಾಟಕ್ಕೆ ಶಿವಸೇನೆಯ ಸಂಸದರು ಹಾಗೂ ಶಾಸಕರು ಮರಾಠಿಗರ ಬೆಂಬಲಕ್ಕೆ ನಿಲ್ಲಬೇಕೆಂದು ಹೇಳಿಕೆ ನೀಡಿ, ಕನ್ನಡಿಗರ ಭಾವನೆಗೆ ಧಕ್ಕೆಯನ್ನುಂಟು ಮಾಡಿರುವ ಠಾಕ್ರೆಯನ್ನು ಕರ್ನಾಟಕ ಸರ್ಕಾರ ಕೂಡಲೇ ಬಂಧಿಸಿ, ಆತನ ವಿರುದ್ಧ ನಾಡದ್ರೋಹಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಘಟಕ ಅಧ್ಯಕ್ಷ ಸಂತೋಷ ಖಂಡ್ರಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಯಶೋಧಾ ಬಿರಡಿ, ಉಪಾಧ್ಯಕ್ಷೆ ಲಕ್ಷ್ಮಿ ಪಾಟೀಲ, ಕಾರ್ಯದರ್ಶಿ ರೂಪಾ ಧನಶೆಟ್ಟಿ, ಮಾರುತಿ ಚೌಕಾಶಿ, ಪವನ ಮಹಾಲಿಂಗಪೂರ, ಪ್ರವೀಣ ಧನಶೆಟ್ಟಿ, ಇಮ್ರಾನ ಜಕಾತಿ, ಬಸವರಾಜ ಹುಬ್ಬಳ್ಳಿ, ಸತ್ತೆವ್ವ ತಹಶೀಲ್ದಾರ, ಗಂಗವ್ವ ಹರಿಜನ, ಮಹಾಂತೇಶ ಕುಂಬಾರ, ರಾಜು ನೀಲಜಗಿ, ಜುಬೇರ ಬಣಗಾರ, ರಮೇಶ ಮಾಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.