ಬೆಳಗಾವಿ: ‘ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿಗಳು ಸ್ಪರ್ಧಿಸಲಿರುವ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲವೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಫಡಣವೀಸ್ ಭರವಸೆ ನೀಡಬೇಕು’ ಎಂದು ಶಿವಸೇನೆ ಮುಖಂಡ, ರಾಜ್ಯಸಭಾ ಸದಸ್ಯ ಸಂಜಯ ರಾವುತ್ ಆಗ್ರಹಿಸಿದರು.
ನಗರದಲ್ಲಿ ಗುರುವಾರ ರಾತ್ರಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಇದಕ್ಕೆ ಬೆಂಬಲವಾಗಿ ಹಾಗೂ ಇದೇ ವಿಷಯವನ್ನು ಇಟ್ಟುಕೊಂಡು ಚುನಾವಣೆಗೆ ಇಳಿದಿರುವ ಎಂಇಎಸ್ ಅಭ್ಯರ್ಥಿಗಳಿಗೆ ಪ್ರೋತ್ಸಾಹಿಸಲು ಫಡಣವೀಸ್ ಈ ಭರವಸೆ ನೀಡಬೇಕು’ ಎಂದರು.
‘ಎಂಇಎಸ್ ಅಭ್ಯರ್ಥಿಗಳ ಪರವಾಗಿ ಫಡಣವೀಸ್ ಪ್ರಚಾರ ನಡೆಸಬೇಕು. ಗಡಿ ವಿಷಯ ಬಂದಾಗ ಕಾಂಗ್ರೆಸ್, ಬಿಜೆಪಿ ತಮ್ಮದೇ ನಿಲುವು ವ್ಯಕ್ತಪಡಿಸುತ್ತವೆ. ಆದರೆ, ಶಿವಸೇನೆ ಯಾವಾಗಲೂ ಮರಾಠಿ ಭಾಷಿಕರ ಪರವಾಗಿ ನಿಲ್ಲುತ್ತದೆ’ ಎಂದರು. ‘ಬಾಳ ಠಾಕ್ರೆ ಅವರ ಕಾಲದಿಂದಲೂ ಶಿವಸೇನೆ ಮರಾಠಿ ಭಾಷಿಕರ ಪರವಾಗಿ ನಿಂತಿದೆ. ಇಲ್ಲಿನ ಮರಾಠಿಗರು ನೀಡಿದ ಪ್ರತಿ ಕರೆಗೂ ಮಹಾರಾಷ್ಟ್ರ ಸ್ಪಂದಿಸಿದೆ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.