ADVERTISEMENT

ಎಮ್‌ಇಎಸ್ ವಿರುದ್ಧ ಕರವೇ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 10:05 IST
Last Updated 1 ಅಕ್ಟೋಬರ್ 2011, 10:05 IST

ಗೋಕಾಕ: ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರನ್ನು ಅಭಿನಂದಿಸುವ ವಿಚಾರದಲ್ಲಿ ವಿರೋಧಿಸುವ ಮೂಲಕ ಕನ್ನಡ ಭಾಷೆ ಮತ್ತು ಕನ್ನಡಿಗರನ್ನು ಅವಮಾನವೆಸಗಿದ ಎಂ.ಇ.ಎಸ್. ನೀತಿಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲ್ಲೂಕು ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಾಲಿಕೆ ಸದಸ್ಯ ಸಂಭಾಜಿ ಚವ್ಹಾಣ ಮತ್ತು ಮಹಾಪೌರ ಮಂದಾ ಬಾಳೇಕುಂದ್ರಿ ಸೇರಿದಂತೆ ಎಂ.ಇ.ಎಸ್.ನ ಎಲ್ಲ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಆಗ್ರಹಿಸಿ, ಅವರ ಪ್ರತಿಕೃತಿ ದಹನ ಮಾಡಿದರು. ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕ.ರ.ವೇ. ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ, ಕನ್ನಡ ಮತ್ತು ಕನ್ನಡಿಗರೊಂದಿಗೆ ಪ್ರತಿಸಲ ತಗಾದೆ ತೆಗೆಯುತ್ತಿರುವ ಎಂ.ಇ.ಎಸ್. ಬೆಳಗಾವಿಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಕಂಗಾಲಾಗಿದೆ. ಇದನ್ನು ಸಹಿಸಲಾಗದೇ ಕನ್ನಡ ವಿರೋಧಿ ಕೆಲಸ ಮಾಡುತ್ತಿದೆ. ಮಹಾನಗರ ಪಾಲಿಕೆಯು ಡಾ. ಕಂಬಾರರಿಗೆ ಮಾಡಿರುವ ಅವಮಾನಕ್ಕೆ ಕ್ಷಮೆ ಕೋರಬೇಕು. ಜಿಲ್ಲಾಡಳಿತ, ಸರ್ಕಾರ ಮಧ್ಯ ಪ್ರವೇಶಿಸಿ, ಕಂಬಾರರನ್ನು ಆಹ್ವಾನಿಸಿ ಸನ್ಮಾನಿಸಬೇಕು ಎಂದು ಆಗ್ರಹಿಸಿದರು.

ಕರವೇ ಮುಖಂಡರಾದ ಸಾಧಿಕ್ ಹಳ್ಯಾಳ, ಶಂಕರ ಹೂಲಿಕಟ್ಟಿ, ಮಹಾದೇವ ಮಕ್ಕಳಗೇರಿ, ಸಿದ್ದಪ್ಪ ಗೌಡರ, ಕಲ್ಲೋಳೆಪ್ಪ ಗಾಡಿವಡ್ಡರ, ಕೃಷ್ಣಾ ಖಾನಪ್ಪನವರ, ಲಕ್ಕಪ್ಪ ಕುಳ್ಳೂರ, ರಘು ಕೊತ್ತಲ, ಗಿರೀಶ ಗಂಗಣ್ಣವರ, ಸಂಜು ತಳವಾರ, ವಿಠ್ಠಲ ಚಳ್ಳಾಯಿ, ಮಂಟೂರ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.