ADVERTISEMENT

ಕಡಿಮೆ ಕಂತಿನ ವಿಮೆ ಸೌಲಭ್ಯ ಜಾರಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 9:45 IST
Last Updated 7 ಫೆಬ್ರುವರಿ 2011, 9:45 IST

ರಾಮದುರ್ಗ: ಐಎನ್‌ಜಿ ವೈಶ್ಯಾ ಜೀವ ವಿಮಾ ಸಂಸ್ಥೆಯು ರೈತರಿಗೆ ಹಾಗೂ ಉದ್ಯಮಿದಾರರು ಕಡಿಮೆ ಕಂತುಗಳಲ್ಲಿ ಹಣ ಪಾವತಿಸುವ ಹಾಗೂ  ದೀರ್ಘ ವರ್ಷಗಳವರೆಗೂ ವಿಮಾ ಸೌಲಭ್ಯ ದೊರೆಯವ ನೂತನ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಉತ್ತರ ಕರ್ನಾಟಕ ವಿಭಾಗೀಯ ವ್ಯವಸ್ಥಾಪಕ ಶರತ್ ಭಟ್ ಹೇಳಿದರು.

ತಾಲ್ಲೂಕಿನ ಹಲಗತ್ತಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡ ಜೀವ ವಿಮೆ ಹಾಗೂ ಪಿಂಚಣಿ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಿಮಾ ಸೌಲಭ್ಯವನ್ನು ಜನರು ಸರಿಯಾಗಿ ಪಡೆದುಕೊಳ್ಳಬೇಕೆಂದು ತಿಳಿಸಿದರು.ದೀರ್ಘ ಕಾಲದವರೆಗೆ ವಿಮಾ ಹಣ ತುಂಬಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದರಿಂದ ಐಎನ್‌ಜಿ ಜೀವ ವಿಮಾ ಸಂಸ್ಥೆಯು ಈ ನೂತನ ಪಾಲಸಿಯನ್ನು ಜಾರಿಗೆ ತಂದಿದೆ. ಪಾಲಸಿದಾರರು ಕೇವಲ 3 ವರ್ಷಗಳಲ್ಲಿ 3 ಕಂತುಗಳನ್ನು ಕಟ್ಟಿ 10 ವರ್ಷಗಳವರೆಗೂ ವಿಮಾ ಸೌಲಭ್ಯ ಪಡೆಯ ಬಹುದಾಗಿದೆ ಎಂದು  ಹೇಳಿದರು.

ಐಎನ್‌ಜಿ ಜೀವ ವಿಮಾ ಸಂಸ್ಥೆಯು ಡಿಸಿಸಿ ಬ್ಯಾಂಕಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಸಹಕಾರಿ ಸಂಘದ ಸದಸ್ಯರು ಹಾಗೂ ರೈತರು ಯಾವುದೇ ರೀತಿಯ ಭಯ ಪಡದೆ ಈ ಜೀವ ವಿಮಾ ಸಂಸ್ಥೆಯಲ್ಲಿ ಪಾಲಸಿ ತೆಗೆದುಕೊಂಡು ತಮ್ಮ ಮುಂದಿನ ಜೀವನಕ್ಕೆ ಭದ್ರತೆ ಒದಗಿಸಿಕೊಳ್ಳಬೇಕು ಎಂದು ಡಿಸಿಸಿ ಬ್ಯಾಂಕಿನ ತಾಲ್ಲೂಕು  ನಿಯಂತ್ರಣಾಧಿಕಾರಿ ವಿ. ಡಿ. ಪಾರಶೆಟ್ಟಿ ತಿಳಿಸಿದರು.

ರೈತರು ಎಷ್ಟೇ ದುಡಿದರೂ ಹಣ ಉಳಿತಾಯ ಮಾಡುವುದು ಕಷ್ಟ ದಾಯಕ. ಮುಂದಿನ ನಮ್ಮ ಕುಟುಂಬದ ಭದ್ರತೆಗಾಗಿ ಜೀವ ವಿಮಾ ಸಂಸ್ಥೆಗೆ ಸಹಾಯಕಾರಿಯಾಗಲಿದೆ ಎಂದು ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಜಿ. ಬಿ. ರಂಗನಗೌಡ್ರ ಸಲಹೆ ನೀಡಿದರು. ಪಿಕೆಪಿಎಸ್ ಬ್ಯಾಂಕ್ ಉಪಾಧ್ಯಕ್ಷ ಪಿ. ಎಂ. ಪಾಟೀಲ, ನಿರ್ದೇಶಕ ಆರ್. ಬಿ. ವಜ್ರಮಟ್ಟಿ, ಆರ್. ಜಿ. ಹಿರೇಮಠ, ಹಾಲು ಉತ್ಪಾದಕ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಎಚ್. ವಿ. ಮುಧೋಳ, ಬ್ಯಾಂಕ್ ನಿರೀಕ್ಷಕ ಆರ್.ಬಿ. ಹಾಲಪ್ಪ ನವರ, ಐಎನ್‌ಜಿ ವಲಯ ವ್ಯವಸ್ಥಾಪಕ ಜಗದೀಶ ಕಲಬುರ್ಗಿ  ಉಪಸ್ಥಿತರಿದ್ದರು. ಕೆ.ಟಿ.ದ್ಯಾವಣ್ಣವರ ಸ್ವಾಗತಿಸಿದರು.  ಐಎನ್‌ಜಿಯ ಸೇಲ್ಸ್ ಅಧಿಕಾರಿ ಐ. ಆರ್. ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.