ADVERTISEMENT

ಕರ್ನಾಟಕವನ್ನು ದುಶ್ಯಾಸನನಿಗೆ ಹೋಲಿಸಿದ ರೇಖಾಚಿತ್ರ !

ಎಂಇಎಸ್ ಕೃತ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 6:11 IST
Last Updated 31 ಮಾರ್ಚ್ 2018, 6:11 IST
ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ದ್ರೌಪದಿ ವಸ್ತ್ರಾಹರಣದ ರೇಖಾಚಿತ್ರ.
ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ದ್ರೌಪದಿ ವಸ್ತ್ರಾಹರಣದ ರೇಖಾಚಿತ್ರ.   

ಬೆಳಗಾವಿ: ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿಭಾಗದ ಸಮಸ್ಯೆಯನ್ನು ಮಹಾಭಾರತದ ದ್ರೌಪದಿ ವಸ್ತ್ರಾಪಹರಣ ಪ್ರಸಂಗಕ್ಕೆ ಹೋಲಿಕೆ ಮಾಡಿದ ರೇಖಾಚಿತ್ರವೊಂದು ಸಾಮಾಜಿಕ ತಾಣಗಳಲ್ಲಿ ಶುಕ್ರವಾರ ವೈರಲ್‌ ಆಗಿದೆ.

ಗಡಿಭಾಗದ ಪ್ರದೇಶಗಳನ್ನು ದ್ರೌಪದಿ ರೂಪದಲ್ಲಿ, ಪಗಡೆ ಆಟದಲ್ಲಿ ಸೋತ ಪಾಂಡವರ ರೂಪದಲ್ಲಿ ಮಹಾರಾಷ್ಟ್ರವನ್ನು, ವಸ್ತ್ರಾಪಹರಣ ಮಾಡುವ ದುಶ್ಯಾಸನ ರೂಪದಲ್ಲಿ ಕರ್ನಾಟಕವನ್ನು ಹಾಗೂ ಅಸಹಾಯಕನಾದ ಭೀಷ್ಮನ ರೂಪದಲ್ಲಿ ಕೇಂದ್ರ ಸರ್ಕಾರವನ್ನು ಚಿತ್ರಿಸಲಾಗಿದ್ದು, ಕೃಷ್ಣನ ಅವತಾರದಲ್ಲಿ ಯಾರು ಬರಲಿದ್ದಾರೆ ಎಂದೂ ಮರಾಠಿಯಲ್ಲಿ ಪ್ರಶ್ನಿಸಲಾಗಿದೆ.

ಕ್ರಮಕ್ಕೆ ಒತ್ತಾಯ: ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಪರ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘ಗಡಿ ಸಮಸ್ಯೆಯನ್ನು ಕೆಣಕುವ ಉದ್ದೇಶದಿಂದಲೇ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಸದಸ್ಯರು ಇಂತಹ ರೇಖಾಚಿತ್ರವನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಇಂತಹ ಕೃತ್ಯಗಳನ್ನು ಅವರು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಶಿವಾಜಿ ಜಯಂತಿ ವೇಳೆ ನಡೆಯುವ ಮೆರವಣಿಗೆಯಲ್ಲೂ ಕರ್ನಾಟಕಕ್ಕೆ ಅವಹೇಳನ ಮಾಡುವ ರೀತಿಯಲ್ಲಿ ರೂಪಕಗಳನ್ನು ಮಾಡಿದ್ದರು. ಈಗ ಅದೇ ಮಾದರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೇಖಾಚಿತ್ರ ಹರಿ
ಬಿಟ್ಟಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಭಾಷೆ, ಗಡಿ ವಿಷಯಗಳನ್ನು ಕೆಣಕಿರುವ ಎಂಇಎಸ್‌ ವಿರುದ್ಧ ಪೊಲೀಸರು ಹಾಗೂ ಜಿಲ್ಲಾಡಳಿತ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.