
ಬೈಲಹೊಂಗಲ: ಸಂಗೊಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ರಾಯಣ್ಣ ಉತ್ಸವದಲ್ಲಿ ನಡೆದ ಕುಸ್ತಿ ಪಂದ್ಯಗಳು ಬಹಳ ರೋಚಕವಾಗಿದ್ದವು. ತರಹೇವಾರಿ ಪುಷ್ಪಗಳಿಂದ, ಹಸಿಯಾದ ಕೆಂಪು ಮಣ್ಣಿನಿಂದ ಮಿಶ್ರಣಗೊಂಡಿದ್ದ ಕುಸ್ತಿ ಕಣ ರಂಗೇರಿತ್ತು. ಕ್ರೀಡಾಪಟುಗಳನ್ನು ಹುರುದುಂಬಿಸಿದ ಕುಸ್ತಿ ಪ್ರೇಮಿಗಳು ಕುಸ್ತಿ ಪಂದ್ಯಗಳನ್ನು ಆಸ್ವಾದಿಸಿ ಸಂಭ್ರಮಿಸಿದರು.
ಮೊದಲ ಜೋಡಿ ಕುಸ್ತಿಯಲ್ಲಿ ಬೆಂಗಳೂರು ಪೈಲ್ವಾನ್ ಶಿವಪ್ರಸಾದ ಖೋತ ಜೊತೆ ಸೆಣಸಿದ ಕೊಲ್ಲಾಪುರದ ಪೈಲ್ವಾನ್ ಬೀರಪ್ಪ ಅಥಣಿ ಪರಾಭವಗೊಂಡರು. ಎರಡನೇ ಜೋಡಿಯಲ್ಲಿ ಬೆಳಗಾವಿ ಪೈಲ್ವಾನ್ ಶಿವಾಜಿ ರೇಡೆಕರ ಜೊತೆ ಸೆಣಸಾಡಿದ ಕೊಲ್ಹಾಪುರದ ಸುನೀಲ ಚಿತ್ ಆದರು.
ಮೂರನೇ ಜೋಡಿಯಲ್ಲಿ ದೊಡವಾಡದ ಪೈಲ್ವಾನ್ ಪ್ರವೀಣ ತುಪ್ಪದ ಚಿಂಚಲಿ ಜೊತೆ ಪೈಲ್ವಾನ್ ಶಿವಪುತ್ರ ಚಿಂಚಲಿ ಸೋತು ಕಣದಿಂದ ಹೊರ ನಡೆದರು. ನಾಲ್ಕನೇ ಜೋಡಿ ದೊಡವಾಡ ಪೈಲ್ವಾನ್ ಸಂಗಪ್ಪ ಬೆಳಗಾರ ಜೊತೆ ಸೆಣಸಿದ ಕೊಲ್ಹಾಪುರ ಪೈಲ್ವಾನ್ ಶ್ರೀಕಾಂತ ಪರಾಭಗೊಂಡರು.
ಐದನೇ ಜೋಡಿಯಲ್ಲಿ ಉಗರಗೋಳ ಪೈಲ್ವಾನ್ ಮೀರಾಸಾಬ್ ರಾಜೇಸಾಬ್ ಜೊತೆ ಸೆಣಸಿದ ಕೊಲ್ಲಾಪುರ ಪೈಲ್ವಾನ್ ಪರಶುರಾಮ ನನ್ನು ಚಿತ್ ಮಾಡಿದರು. ಒಟ್ಟು 20 ಜೋಡಿಯ ಕುಸ್ತಿಗಳು ತಮ್ಮ ಶಕ್ತಿ ಪ್ರದರ್ಶಿಸಿದವು. ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಕುಸ್ತಿ ಉದ್ಘಾಟಿಸಿದರು. ವಿಶೇಷ ತಹಶೀಲ್ದಾರ ಯ.ರು.ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಲ್ಲವ್ವಾ ಹಳೇಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ, ನಿರ್ದೇಶಕ ಬಸವರಾಜ ಎಚ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.