ADVERTISEMENT

ಜನರ ಸಮಸ್ಯೆಗೆ ಸ್ಪಂದಿಸಿ

​ಪ್ರಜಾವಾಣಿ ವಾರ್ತೆ
Published 22 ಮೇ 2012, 6:30 IST
Last Updated 22 ಮೇ 2012, 6:30 IST

ಹುಕ್ಕೇರಿ: ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಕೊಡಾಕ ಆಗುದಿಲ್ಲ ಅಂದ್ರ ಸರ್ಕಾರಿ ನೌಕರಿ ಯಾಕ್ ಮಾಡಬೇಕ್?. ಉಂಡ-ತಿಂದ ಆರಾಮ ಇರುದಾದ್ರ ನೌಕರಿ ಬಿಟ್ಟು ಅಥವಾ ವರ್ಗ ಮಾಡಿಸಿಕೊಂಡು ಹೋಗಿರಿ ಎಂದು ಕೃಷಿ ಸಚಿವ ಉಮೇಶ್ ಕತ್ತಿ ಅವರು ತಾಲ್ಲೂಕಿನ ಆಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಅವರು ಸೋಮವಾರ ತಾಲ್ಲೂಕು ಪಂಚಾಯಿತಿ ಸಭಾ ಬವನದಲ್ಲಿ  ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆ ಮತ್ತು ಬರ ಪರಿಹಾರ ಕುರಿತು ಕರೆದ  ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಮಾತನಾಡಿದರು.

ಬಹುತೇಕ ಗ್ರಾಮಗಳಲ್ಲಿಯ ಕೈ ಪಂಪುಗಳು ರಿಪೇರಿಯಲ್ಲಿ ಇರುವದು, ವಿದ್ಯುತ್ ಮೋಟರ್ ಸುಟ್ಟಿರುವದು, ಕರೆಂಟ್ ಅಭಾವದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ.  ಕುಡಿಯುವ ನೀರಿನ ಸಲುವಾಗಿ ಪ್ರತ್ಯೇಕ ಹಣಕಾಸಿನ ವ್ಯವಸ್ಥೆ ಇರುವುದರಿಂದ ಆ ಹಣವನ್ನು ಬಳಸಿ ಬೇಗೆ ಕೆಲಸ ಮಾಡಿ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.

ಹುಕ್ಕೇರಿ-ಸಂಕೇಶ್ವರ ಪಟ್ಟಣಗಳಿಗೆ ಕುಡಿಯುವ ನೀರಿನ ತೊಂದರೆಯಾದರೆ ಬೋರವೆಲ್ ಹಾಕಲು ಹೆಚ್ಚಿನ ಅನುದಾನ ನೀಡುವದಾಗಿ ಭರವಸೆ ನೀಡಿದರು.ತಾಲ್ಲೂಕಿನಲ್ಲಿ ಬೇಸಿಗೆಯ ದಿನದಲ್ಲಿ ಕುಡಿಯುವ ನೀರಿನ ತೊಂದರೆ ಯಾಗದಂತೆ ಗ್ರಾಮದಲ್ಲಿ ತಾಲ್ಲೂಕು ನೋಡಲ್ ಅಧಿಕಾರಿಗಳು ಸಭೆ ಜರುಗಿಸಬೇಕೆಂದು ಮತ್ತು ನಿರಂತರ ಗಮನ ಹರಿಸಬೇಕೆಂದು ಹೇಳಿದ ಅವರು ಸಾಮಾನ್ಯ ಜನರ ಕಷ್ಟ ಕಾರ್ಪಣ್ಯ ತಿಳಿದು ಸಮಸ್ಯೆಗೆ ಸ್ಪಂದಿಸಿರಿ ಎಂದರು.

ಜಿ.ಪಂ.ಸದಸ್ಯರಾದ ತನುಜಾ ಜಾಧವ, ಅಂಜನಾ ಹೆಬ್ಬಾಳಿ, ನಂದಾ ಸನ್ನಾಯಿಕ, ಪರಶುರಾಮ ನಾಯ್ಕ, ಮಕಬುಲ್‌ಸಾಬ ಮುಲ್ಲಾ, ತಾ.ಪಂ.ಸದಸ್ಯೆಯರಾದ ಶಹನಾಜ, ಮಂಜುಳಾ, ಕಲಾವತಿ, ಚಂದ್ರವ್ವ, ಲಲಿತಾ, ಕಮಲವ್ವ,ಶಿವಾನಂದ, ಚಂದ್ರಶೇಖರ ತಮ್ಮ ಭಾಗದ ನೀರಿನ ಸಮಸ್ಯೆ ಕುರಿತು ಸಚಿವರಿಗೆ ವಿವರಿಸಿದರು.

ಜಿ.ಪಂ.ಎಂಜನಿಯರಿಂಗ್ ವಿಭಾಗದ ಸ.ಕಾ.ಎಂಜನಿಯರ್ ಆರ್.ಕೆ. ನಿಂಗನೂರಿ, ಜೆಇ ರಾಜು ರವದಿ ಸಭೆಗೆ ಮಾಹಿತಿ ನೀಡುವುದರ ಜೊತೆಗೆ ನೀರಿನ ಸ್ಥಿತಿಗತಿ ವಿವರಿಸಿ ತೊಂದರೆ ಆಗದಂತೆ ಕ್ರಮ ಕೈಕೊಳ್ಳಲಾಗಿದೆ ಎಂದರು.

ಜಿ.ಪಂ. ಉಪ ಕಾರ್ಯದರ್ಶಿ ರವಿ ಬಸರಳ್ಳಿ, ನೋಡಲ್ ಅಧಿಕಾರಿ ಎನ್. ಎಸ್.ಚೌಗಲೆ, ತಹಶೀಲ್ದಾರ ಎ.ಐ. ಅಕ್ಕಿವಾಟೆ ಹಾಜರಿದ್ದರು.ಪಿ.ಎ.ಚಟ್ನಿ ಸ್ವಾಗತಿಸಿದರು. ಆರ್.ಎ. ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.