ADVERTISEMENT

ದೇವರ ಕಂಡಿಲ್ಲಾಂತ್ಯಾರ ಹೇಳ್ತಾರ? ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2011, 12:05 IST
Last Updated 1 ಆಗಸ್ಟ್ 2011, 12:05 IST
ದೇವರ ಕಂಡಿಲ್ಲಾಂತ್ಯಾರ ಹೇಳ್ತಾರ? ಕೃತಿ ಬಿಡುಗಡೆ
ದೇವರ ಕಂಡಿಲ್ಲಾಂತ್ಯಾರ ಹೇಳ್ತಾರ? ಕೃತಿ ಬಿಡುಗಡೆ   

ಬೆಳಗಾವಿ:ಕ್ರಿಯೆ ಮತ್ತು ಶಬ್ದಗಳಲ್ಲಿ ನಾವು ದೇವರನ್ನು ಕಾಣಲು ಹೊರಟಿದ್ದೇವೆ. ನೀಲಗಂಗಾ ಚರಂತಿಮಠರು ತಮ್ಮ ಕೃತಿಯ ಮೂಲಕ ಕ್ರಿಯೆಯಲ್ಲಿ ದೇವರು ಅಡಗಿರುವುದನ್ನು ತೋರಿಸಿಕೊಟ್ಟಿದ್ದಾರೆ” ಎಂದು ಖ್ಯಾತ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಹೇಳಿದರು.

ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುತ್ತೂರು ಕಪಿನಿ ನಂಜುಂಡ ದೇಶಿಕೇಂದ್ರದ ದತ್ತಿ ವಚನ ಗಾಯನ ಕಾರ್ಯಕ್ರಮದಲ್ಲಿ ನೀಲಗಂಗಾ ಚರಂತಿಮಠರ `ದೇವರ ಕಂಡಿಲ್ಲಂತ್ಯಾರ ಹೇಳ್ತಾರ?~ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ನೀಲಗಂಗಾರ ಪುಸ್ತಕಗಳಲ್ಲಿ ವಾಸ್ತವ ಘಟನೆಗಳ ಸುತ್ತ ಹೆಣೆದ ಕತೆಗಳಿವೆ. ಇಂಥ ಕತೆಗಳನ್ನು ಇಂಗ್ಲಿಷ್ ಸಾಹಿತ್ಯದಲ್ಲಿ ಟಾಲ್‌ಸ್ಟಾಯ್ ಬರೆದಿದ್ದನ್ನು ಕಾಣಬಹುದು. ಇವರ ಪುಸ್ತಕದಲ್ಲಿ ಸಾಹಿತ್ಯದ ಉತ್ಕೃಷ್ಟ ಕಲೆಗಾರಿಕೆ ಇದೆ” ಎಂದು ಹೇಳಿದರು.

ಪುಸ್ತಕ ಪರಿಚಯಿಸಿದ ಸಾಹಿತಿ ಹನುಮಾಕ್ಷಿ ಗೋಗಿ, “ಸ್ವಚ್ಛಂದ ಬರವಣಿಗೆಯ ಸ್ವತಂತ್ರ ಕತೆಗಳಿವು. ಇಲ್ಲಿಯ ಎಲ್ಲ ಕಥೆಗಳ ಕೇಂದ್ರ ಬಿಂದು ತಾಯಿ. ಇದೊಂದು ಯಶಸ್ವಿ ಕಥಾ ಸಂಕಲನ” ಎಂದರು. ಅಧ್ಯಕ್ಷತೆ ವಹಿಸಿದ್ದ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ, “ಇಂದಿನ ಸಮಾಜದಲ್ಲಿ ವಾತ್ಸಲ್ಯ, ಅಂತಃಕರಣದಿಂದ ಕೂಡಿದವರನ್ನು ಕಾಣುವುದು ವಿರಳ. ಅಂಥ ಮಾತೃತ್ವವನ್ನು ಹೊಂದಿದ ತಾಯಂದಿರನ್ನು ಇಲ್ಲಿ ಕಾಣಬಹುದು. ಸರಳ ಶೈಲಿಯಿಂದ ಕೂಡಿದ ಉತ್ತಮ ಕೃತಿಯಿದು” ಎಂದು ಹೇಳಿದರು.

ಲೇಖಕಿ ನೀಲಗಂಗಾ ಚರಂತಿಮಠ ಮಾತನಾಡಿದರು. ನೈನಾ ಗಿರಿಗೌಡರ ಪ್ರಾರ್ಥಿಸಿದರು. ಸುಮಾ ಕಿತ್ತೂರ ಸ್ವಾಗತಿಸಿದರು. ಭಾರತಿ ಮಠದ ಅತಿಥಿಗಳನ್ನು ಪರಿಚಯಿಸಿದರು. ದೀಪಿಕಾ ಚಾಟೆ ನಿರೂಪಿಸಿದರು. ಜಯಶೀಲ ಬ್ಯಾಕೋಡ ವಂದಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಜಿಲ್ಲಾ ಲೇಖಕಿಯರ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.