ADVERTISEMENT

ಪಕ್ಷ ತ್ಯಜಿಸಿದರೆ ನಷ್ಟವೇನಿಲ್ಲ: ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 8:18 IST
Last Updated 6 ಡಿಸೆಂಬರ್ 2012, 8:18 IST

ಗೋಕಾಕ: ಬಿಜೆಪಿ ರಾಷ್ಟ್ರೀಯ ಪಕ್ಷ. ಇಲ್ಲಿ ಪಕ್ಷವೇ ಮುಖ್ಯ ಹೊರತು ಯಾರೂ ದೊಡ್ಡವರಲ್ಲ. ವ್ಯಕ್ತಿಯೊಬ್ಬರು ಪಕ್ಷದಿಂದ ನಿರ್ಗಮಿಸಿದ ಮಾತ್ರಕ್ಕೆ ಪಕ್ಷಕ್ಕೆ ಧಕ್ಕೆಯಾಗುತ್ತದೆ ಎಂದು ಊಹಿಸುವುದು ಸಾಧುವಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷದ ಶಕ್ತಿ ಏನೆಂಬುದನ್ನು ತೋರಿಸಿಕೊಡುತ್ತೇವೆ ಎಂದು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಗಮನದ ಕುರಿತು ಪರೋಕ್ಷ ಮಾತುಗಳನ್ನಾಡಿದರು.

ತಾಲ್ಲೂಕಿನ ಕುಲಗೋಡ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ   ಅವರು ಮಾತನಾಡಿದರು.  2-3 ತಿಂಗಳಿನಿಂದ ನಡೆದ ಡಾಂಭಿಕ ವಿದ್ಯಮಾನಗಳಿಗೆ ಪೂರ್ಣ ವಿರಾಮ ಹಾಕಲಾಗಿದೆ. ಕಾಡುವವರು ಪಕ್ಷದಿಂದ ಹೊರಹೋಗಿದ್ದಾರೆ. ಹೀಗಾಗಿ ಈಗ ಪಕ್ಷದಲ್ಲಿ ಸಂತಸದ ವಾತಾವರಣವಿದೆ ಎಂದರು.

ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕೆ. ಎಸ್. ಈಶ್ವರಪ್ಪ, ಅನಂತಕುಮಾರ, ಸದಾನಂದಗೌಡ, ಆರ್. ಅಶೋಕ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದ ಅವರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಅರಬಾವಿ ಮತಕ್ಷೇತ್ರದಲ್ಲಿ ನೂರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಪರ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಸಚಿವರು ತಿಳಿಸಿದರು.

ಕುಲಗೋಡ ಗ್ರಾ.ಪಂ. ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಸಚಿವ ಜಾರಕಿಹೊಳಿ, ಸಮಾಜ ಕಲ್ಯಾಣ ಇಲಾಖೆಯಿಂದ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಅಡಿಗಲ್ಲು, 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಮಿನಿ ಅಂಬೇಡ್ಕರ್ ಭವನದ ಉದ್ಘಾಟನೆ, 1ನೇ ಹಂತದ ಸುವರ್ಣ ಗ್ರಾಮೋದಯ ಯೋಜನೆಯ 111.33 ಲಕ್ಷ ರೂಪಾಯಿ ವೆಚ್ಚದ ಸಿವಿಲ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ, 1.10 ಕೋಟಿ ರೂಪಾಯಿ ವೆಚ್ಚದ ಎಸ್‌ಸಿಪಿ ಯೋಜನೆಯಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ, ಬಾಗಿಮನಿ ತೋಟದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕಟ್ಟಡದ ಉದ್ಘಾಟನೆ, ಸಕಿಪ್ರಾ ಶಾಲೆ, ಮೆಟಗುಡ್ ತೋಟದಲ್ಲಿ 9 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಕಟ್ಟಡ ಮತ್ತು 4.64 ಲಕ್ಷ ರೂಪಾಯಿ ವೆಚ್ಚದ ಕೆಜಿಎಸ್ ಮುಖ್ಯ ಶಿಕ್ಷಕರ ನೂತನ ಕೊಠಡಿಗಳ ಉದ್ಘಾಟನೆ ಮತ್ತು 4.64 ಲಕ್ಷ ರೂಪಾಯಿ ವೆಚ್ಚದ ಕೆಜಿಎಸ್ ಹೆಚ್ಚುವರಿ ಶಾಲಾ ಕೊಠಡಿಗೆ ಸಚಿವರು ಅಡಿಗಲ್ಲು ನೆರವೇರಿಸಿದರು.

ಸತ್ಕಾರ: ಕೌಜಲಗಿ ಜಿ.ಪಂ. ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಕೆ.ಬಿ. ನಾಯಿಕ, ಎಸ್.ಆರ್. ಭೋವಿ, ಕೆ.ಬಿ. ಬಾಗಿಮನಿ, ಸಾಬಣ್ಣ ಚಿಪ್ಪಲಕಟ್ಟಿ, ರತ್ನಪ್ಪ ಮೆಟಗುಡ್ಡ, ಗೋವಿಂದಪ್ಪ ಮಳಲಿ, ಬಸಪ್ಪ ದೇವರ ಅವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಟಿಎಪಿಸಿಎಂಎಸ್ ನಿರ್ದೇಶಕ ಅಶೋಕ ನಾಯಿಕ, ಜಿ.ಪಂ. ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ (ಕಲ್ಲೋಳಿ), ತಾ.ಪಂ. ಅಧ್ಯಕ್ಷೆ ಕಸ್ತೂರಿ ಕೋಣಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗೋವಿಂದ ಕೊಪ್ಪದ, ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಎಲ್. ಟಿ. ತಪಶಿ, ಹನಮಂತಗೌಡ ಪಾಟೀಲ, ಬಾಬು ಬಳಿಗಾರ, ವೈ.ಕೆ. ಗಂಗರಡ್ಡಿ, ಸಿದ್ದಪ್ಪ ಹಳ್ಳೂರ, ಸದಾನಂದ ಪಂಡಿತ, ರಾಮಣ್ಣ ಮಹಾರಡ್ಡಿ, ರಾಚಪ್ಪ ಅಂಗಡಿ, ಲಕ್ಷ್ಮಣ ತಪಸಿ, ಬಸಗೌಡ ಪಾಟೀಲ (ಮೆಳವಂಕಿ), ತಾಯವ್ವ ಪೂಜೇರಿ, ಭೀಮಶಿ ಪೂಜೇರಿ, ಡಾ. ಬಿ.ಬಿ. ಬಾಗಿಮನಿ, ಕೆ.ವಿ. ನಾಯ್ಕ, ಎಂ.ಎಂ. ಪಾಟೀಲ, ಪ್ರಭಾ ಶುಗರ್ಸ್‌ ನಿರ್ದೇಶಕ ಗಿರೀಶ ಹಳ್ಳೂರ, ಈರಣ್ಣ ಜಾಲಿಬೇರಿ, ಕಲ್ಲಪ್ಪಗೌಡ ಲಕ್ಕಾರ, ಜಿ.ಪಂ. ಮಾಜಿ ಸದಸ್ಯ ರಂಗಪ್ಪ ಇಟ್ಟನ್ನವರ, ಹನಮಂತ ಹುಚರಡ್ಡಿ, ರವಿ ಸೋನವಾಲ್ಕರ, ನಿಂಗಪ್ಪ ಫಿರೋಜಿ, ಮೂಡಲಗಿ ಪುರಸಭೆ ಉಪಾಧ್ಯಕ್ಷ ಸಂತೋಷ ಸೋನವಾಲ್ಕರ ಮತ್ತು ಅನೇಕ ಮುಖಂಡರು ಉಪಸ್ಥಿತರಿದ್ದರು.

ಶಿಂಗಳಾಪುರ ಹನಮಂತ ದೇವಸ್ಥಾನ ಕಳಸಾರೋಹಣ ನಾಳೆ
ಘಟಪ್ರಭಾ (ಗೋಕಾಕ)
: ಇಲ್ಲಿಗೆ ಸಮೀಪದ ಶಿಂಗಳಾಪುರ ಗ್ರಾಮದ ಹನಮಂತ ದೇವಸ್ಥಾನದ ವಾಸ್ತು ಶಾಂತಿ ಹಾಗೂ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಇದೇ 7ರಂದು ಜರುಗಲಿದೆ.

ಅಂದು ಬಲಭೀಮ ದೇವರಿಗೆ ತೈಲಾಭಿಷೇಕ, ಮಹಾಪೂಜೆ ಮತ್ತು ಸುಮಂಗಲೆಯರಿಂದ ಕುಂಭ ಮೇಳದೊಂದಿಗೆ ಲಕ್ಷ್ಮೀದೇವಿಯ ಅಭಿಷೇಕ ಹಾಗೂ ಪೂಜಾರ್ಚನೆ, ನಂತರ ಕಳಸಾರೋಹಣ ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯವನ್ನು ಪ್ರಭಾ ಶುಗರ್ಸ್‌'ನ ಶಂಕರಾಚಾರ್ಯ ಮಠದ ಶ್ರೀ ದಯಾನಂದ ಸ್ವಾಮೀಜಿ ನೆರವೇರಿಸುವರು.

ಶಾಸಕ ರಮೇಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ, ಜಾವೀದ ಮುಲ್ಲಾ, ಗ್ರಾ.ಪಂ. ಅಧ್ಯಕ್ಷ ಸಂಭಾಜಿ ಈರಪ್ಪಗೋಳ, ಆನಂದ ಮಗದುಮ್, ಸೈರಾಬಾನು ಮುಲ್ಲಾ, ಭೀಮಪ್ಪ ಕೇಸರೂರ, ಬಿಸ್ಮಿಲ್ಲಾ ಪೀರಜಾದೆ, ಅಪ್ಪಣ್ಣ ಮಾಳಂಗಿ, ಲಗಮಣ್ಣಾ ತೋರಗಲ್, ಹುಸೇನಸಾಬ್ ಪೀರಜಾದೆ, ಗೋಪಾಲ ಪೂಜೇರಿ, ಶ್ರೀಶೈಲ ಕಂಬಿ, ನಾಗಪ್ಪ ಮಾಳವ್ವಗೋಳ ಉಪಸ್ಥಿತರಿರುವರು.

ಮಧ್ಯಾಹ್ನ ಮಹಾಪ್ರಸಾದ, ನಂತರ ಹಲ್ಲು ಹಚ್ಚದ ಜೋಡು ಕುದುರೆ ಶರ್ಯತ್ತು, ಒಂದು ಕುದುರೆ ಒಂದು ಎತ್ತು ಗಾಡಿ ಶರ್ಯತ್ತು ಜರುಗಲಿದೆ. ರಾತ್ರಿ 10ಕ್ಕೆ `ಮಿತ್ರ ದ್ರೋಹಿ' ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕಳಸಾರೋಹಣ ಸಮಿತಿ ಮುಖ್ಯಸ್ಥ ಆನಂದ ಮಗದುಮ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.