ಬೈಲಹೊಂಗಲ: ‘ಬೆಳಗಾವಿ ಜಿಲ್ಲೆ ವಿಭಜನೆ ಮಾಡಬಾರದು. ಒಂದು ವೇಳೆ ಜಿಲ್ಲೆ ವಿಭಜನೆ ಅನಿವಾರ್ಯವಾದಲ್ಲಿ ಉಪವಿಭಾಗ ಕೇಂದ್ರವಾದ ಬೈಲ
ಹೊಂಗಲ ನಗರವನ್ನು ಮೊದಲು ನೂತನ ಜಿಲ್ಲಾ ಕೇಂದ್ರವನ್ನಾಗಿಸಬೇಕು’ ಎಂದು ಬೆಳಗಾವಿ ಜಿಲ್ಲಾ ವಿಭಜನೆ ಹೋರಾಟ ಸಮಿತಿ ಗೌರವ ಅಧ್ಯಕ್ಷ, ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಸಮಿತಿ ಅಧ್ಯಕ್ಷ ಶಿವರಂಜನ ಬೋಳಣ್ಣವರ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಪ್ರಸ್ತಾವನೆ ಚಾಲನೆ ಪಡೆದಾಗ, ಅದನ್ನು ವಿರೋಧಿಸಿ ಬೆಳಗಾವಿ ಜಿಲ್ಲೆಯನ್ನು ಅಖಂಡವಾಗಿಯೇ ಉಳಸಿಕೊಳ್ಳುವ ಕುರಿತು ಸರ್ಕಾರದ ಮುಂದೆ ವಿವರಿಸಿ ಮನವಿ ಮಾಡಲಾಗಿತ್ತು. ಆದರೆ ಇತ್ತೀಚೆಗೆ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ವಿಷಯ ಸ್ಪಷ್ಟವಾಗತೊಡಗಿದೆ. ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದಾದರೆ ಉಪವಿಭಾಗವಾರು ಕೇಂದ್ರಗಳನ್ನು ಜಿಲ್ಲೆಗಳನ್ನಾಗಿ ಮಾಡಬೇಕು ಎಂದರು.
ಬೈಲಹೊಂಗಲ ಜಿಲ್ಲಾ ಕೇಂದ್ರವಾಗಲು ಸಕಲ ಸಾಮಾಜಿಕ, ಐತಿಹಾಸಿಕ, ವಾಣಿಜ್ಯ, ಅರ್ಹತೆ, ಸಾಮರ್ಥ ಹೊಂದಿದೆ. ಇಂಥ ಐತಿಹಾಸಿಕ ಹಾಗೂ ಪ್ರಚಲಿತ ಮಹತ್ವವನ್ನು ಪರಿಗಣಿಸಿ ಬೈಲಹೊಂಗಲವನ್ನು ಜಿಲ್ಲಾ ಕೇಂದ್ರವಾಗಿಸಬೇಕು. ಈ ಭಾಗದ ಜನರ ಭಾವನೆಗಳ ಮಹಾಪೂರವನ್ನು ಘಾಸಿಗೊಳಿಸಬಾರದು, ಬೈಲಹೊಂಗಲವನ್ನು ಜಿಲ್ಲಾ ಕೇಂದ್ರವಾಗಿ ಮಾಡದೇ ಇರುವ ದುಡುಕಿನ ನಿರ್ಣಯವನ್ನು ಸರ್ಕಾರ ತೆಗೆದುಕೊಳ್ಳಬಾರದು’ ಎಂದು ಅವರು ಆಗ್ರಹದೊಂದಿಗೆ ಎಚ್ಚರಿಕೆಯನ್ನೂ ನೀಡಿದರು.
ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ, ಹಿಂದಿನ ಶಾಸಕರಾದ ಮಹಾಂತೇಶ ಕೌಜಲಗಿ, ಜಗದೀಶ ಮೆಟಗುಡ್ಡ, ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ, ಸಹಕಾರಿ ಧುರೀಣ ಬಸವರಾಜ ಬಾಳೇಕುಂದರಗಿ, ಹೋರಾಟ ಸಮಿತಿ ಮುಖಂಡರಾದ ಸಿ.ಕೆ. ಮೆಕ್ಕೇದ, ಮಹಾಂತೇಶ ತುರಮರಿ, ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಶಂಕರ ಮಾಡಲಗಿ, ಕಾಂಗ್ರೆಸ್ ಯುವ ಮುಖಂಡ ಕಿರಣ ಸಾಧುನವರ, ವಕೀಲರ ಸಂಘದ ಅಧ್ಯಕ್ಷ ಎಂ.ವೈ. ಸೋಮಣ್ಣವರ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.