ADVERTISEMENT

ಬ್ಯಾಂಕಿನ ಭದ್ರತಾ ವ್ಯವಸ್ಥೆ ಬಲಪಡಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 6:24 IST
Last Updated 3 ಜುಲೈ 2013, 6:24 IST

ಬೆಳಗಾವಿ: `ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಕಳ್ಳತನ ಪ್ರಕರಣ ನಡೆಯುವುದನ್ನು ತಡೆ ಗಟ್ಟಲು ಬ್ಯಾಂಕಿನ ವ್ಯವಸ್ಥಾಪಕರು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳ ಬೇಕು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಸೂಚಿಸಿದರು.

ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಮಂಗಳವಾರ ಕರೆದಿದ್ದ ಬ್ಯಾಂಕ್ ವ್ಯವಸ್ಥಾಪಕರ ಸಭೆಯಲ್ಲಿ ಮಾತನಾಡಿದ ಅವರು, `ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಅದೇ ರೀತಿ ಬೆಳಗಾವಿಯಲ್ಲೂ ನಡೆ ಯುವ ಸಾಧ್ಯತೆ ಇದೆ. ಹೀಗಾಗಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿ ಕೊ ಳ್ಳುವ ಮೂಲಕ ಪೊಲೀಸರಿಗೆ ಸಹಕಾರ ನೀಡಬೇಕು' ಎಂದು ತಿಳಿಸಿದರು.

ಎಟಿಎಂಗಳಲ್ಲಿ ಹಣ ಹಾಕುವ ಸಿಬ್ಬಂದಿ ಸಂಪೂರ್ಣ ವಿವರವನ್ನು ಬ್ಯಾಂಕ್ ವ್ಯವಸ್ಥಾಪಕರು ಹೊಂದಿರ ಬೇಕು. ಅವರ ನಡತೆಯ ಬಗ್ಗೆ ಪರಿ ಶೀಲಿಸಿ ವರದಿಯನ್ನು ಪಡೆದುಕೊಳ್ಳ ಬೇಕು. ಈ ಹಿಂದೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಟಿಎಂ ಕಳ್ಳತನ ಪ್ರಕರಣದಲ್ಲಿ ಹಣ ಹಾಕುವ ಸಿಬ್ಬಂದಿಯೇ ರೂ. 42 ಲಕ್ಷ ಹಣವನ್ನು ದೋಚಿ ಪರಿರಿಯಾಗಿದ್ದ. ಬಳಿಕ ಆತನನ್ನು 24 ಗಂಟೆಯ ಒಳಗೆ ನಾವು ಬಂದಿಸಿದ್ದೆವು' ಎಂದು ತಿಳಿಸಿದರು.

`ಬ್ಯಾಂಕ್ ಹಾಗೂ ಎಟಿಎಮ್‌ಗಳ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳುವಾಗ ಅವರ ಪೂರ್ವಾಪರ ವಿವರಗಳನ್ನು ಪಡೆದುಕೊಳ್ಳಬೇಕು. ಅವರು ರಾತ್ರಿ ವೇಳೆಯೂ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸ ಬೇಕು' ಎಂದು ತಿಳಿಸಿದರು.

`ನಗರ ಹಾಗೂ ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಬ್ಯಾಂಕ್‌ಗಳಿಗೂ `ಕಳ್ಳತನ ಎಚ್ಚರಿಕೆ ಘಂಟೆ' ಗಳನ್ನು ಅಳವಡಿಸಬೇಕು. ಅದರ ಸಂಪರ್ಕವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೂ ಹೊಂದಿರುವಂತೆ ನೋಡಿಕೊಳ್ಳಬೇಕು.

ಆದರೆ, ಯಾರೇ ಬ್ಯಾಂಕ್ ದರೋಡೆ ಮಾಡಲು ಪ್ರಯತ್ನಿ ಸಿದರೂ ಪೊಲೀಸ್ ಠಾಣೆಯಲ್ಲಿ ಘಂಟೆಯ ಶಬ್ದ ಕೇಳಿಸುವುದರಿಂದ ದರೋಡೆಯನ್ನು ತಡೆಗಟ್ಟಲು ಸಾಧ್ಯವಿದೆ. ಬ್ಯಾಂಕಿನ ಹೊರಗಡೆ ಹಾಗೂ ಒಳಗಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಅಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಬೇಕು' ಎಂದು ಜಿಲ್ಲಾ ಪೊಲೀಸ್‌ವರಿಷ್ಠಾಧಿ ಕಾರಿಗಳು ಸೂಚಿಸಿದರು.

ರಾತ್ರಿ ಗಸ್ತು ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಬ್ಯಾಂಕ್ ಹಾಗೂ ಎಟಿಎಂಗಳ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಲಾಗು ವುದು ಎಂದು ಸಂದೀಪ ಪಾಟೀಲ ತಿಳಿಸಿದರು.

ಸಭೆಯಲ್ಲಿ ಮಾರ್ಕೆಟ್ ಡಿಎಸ್‌ಪಿ ಮುತ್ತುರಾಜ್, ಖಡೆಬಜಾರ್ ಡಿಎಸ್‌ಪಿ ರವಿಕುಮಾರ, ಬೆಳಗಾವಿ ನಗರದ ಬ್ಯಾಂಕ್‌ಗಳ ವ್ಯವಸ್ಥಾಪಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.