ADVERTISEMENT

ಭಾಗ್ಯಶ್ರೀ ಸಾವಿನ ಪ್ರಕರಣ: ಕೊಲೆ ಶಂಕೆ-ತಂದೆ ದೂರು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 9:03 IST
Last Updated 12 ಡಿಸೆಂಬರ್ 2012, 9:03 IST

ಖಾನಾಪುರ: `ಇತ್ತೀಚೆಗೆ ಮೃತಪಟ್ಟ ನಮ್ಮ ಮಗಳು ಭಾಗ್ಯಶ್ರೀಯ ಸಾವು ಸಹಜ ಸಾವಲ್ಲ, ಅದು ಕೊಲೆ. ಪೊಲೀಸರು  ತನಿಖೆ ನಡೆಸಿ ಮಗಳನ್ನು ಕೊಂದವರನ್ನು ಬಂಧಿಸಬೇಕು' ಎಂದು ಭಾಗ್ಯಶ್ರೀಯ ತಂದೆ ಲಕ್ಷ್ಮಣ ಪಾಟೀಲ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳಿಗೆ ಮಂಗಳವಾರ ಸಲ್ಲಿಸಿದ ದೂರಿನಲ್ಲಿ ಆಗ್ರಹಿಸಿದ್ದಾರೆ.

ತಾಲ್ಲೂಕಿನ ಕಾರಗಲಾ ಗ್ರಾಮದ ಭಾಗ್ಯಶ್ರಿ ಕಳೆದ ಎರಡು ವರ್ಷಗಳ ಹಿಂದೆ ಅದೇ ಗ್ರಾಮದ ವೈಭವ ಬಾಲಕೃಷ್ಣ ಪಾಟೀಲ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರಿಬ್ಬರ ಪ್ರೀತಿಗೆ ಭಾಗ್ಯಶ್ರಿ ಮನೆಯವರು ಒಪ್ಪದ ಕಾರಣ ಮನೆಯಿಂದ ಹೊರಬಂದು ವಿವಾಹವಾಗಿದ್ದ ವೈಭವ-ಭಾಗ್ಯಶ್ರಿ ದಂಪತಿಗೆ ಹನ್ನೊಂದು ತಿಂಗಳ ಹಿಂದೆ ವೈಭವಿ ಎಂಬ ಹೆಣ್ಣುಮಗು ಜನಿಸಿತ್ತು.

ಮುಂಚಿನಿಂದಲೂ ಕುಡಿತದ ಚಟವಿದ್ದ ವೈಭವ ಕುಡಿಯಲು ಹಣ ನೀಡುವಂತೆ ಮೇಲಿಂದ ಮೇಲೆ ಪತ್ನಿಗೆ ಪೀಡಿಸುತ್ತಿದ್ದ. ಕುಡಿದು ಬಂದಾಗಲೆಲ್ಲ ಭಾಗ್ಯಶ್ರೀಯ ಮೇಲೆ ಹಲ್ಲೆ ನಡೆಸುತ್ತಿದ್ದ. ವೈಭವನ ಜೊತೆ ಆತನ ತಾಯಿ ಮಾಧುರಿಯೂ ಭಾಗ್ಯಶ್ರಿಗೆ ತೊಂದರೆ ನೀಡುತ್ತಿದ್ದಳು. ಇಷ್ಟೆಲ್ಲ ತೊಂದರೆಯಾಗುತ್ತಿದ್ದರೂ ಅದನ್ನೆಲ್ಲ ಸಹಿಸಿಕೊಂಡ ಭಾಗ್ಯಶ್ರಿ ವೈಭವವನ್ನು ತಾನು ಇಷ್ಟ ಪಟ್ಟು ಮದುವೆಯಾದೆ ಎಂಬ ಕಾರಣಕ್ಕೆ ತನಗಾದ ತೊಂದರೆ ಹಾಗೂ ಕಿರುಕುಳದ ಬಗ್ಗೆ ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಕಳೆದ ನ.20ರಂದು ಕುಡಿದ ಅಮಲಿನಲ್ಲಿದ್ದ ವೈಭವ ಮಧ್ಯಾಹ್ನ ಮನೆಯಲ್ಲಿ ಒಬ್ಬಳೇ ಇದ್ದ ಭಾಗ್ಯಶ್ರಿಯನ್ನು ಬೆಂಕಿ ಹಚ್ಚಿ ಕೊಂದಿದ್ದಾನೆ ಎಂದು ಎಸ್‌ಪಿ ಅವರಿಗೆ ನೀಡಿದ ದೂರಿನಲ್ಲಿ ಲಕ್ಷ್ಮಣ ಪಾಟೀಲ ತಿಳಿಸಿದ್ದಾರೆ.

ಶೇ 60ಕ್ಕೂ ಹೆಚ್ಚು ಭಾಗ ಸುಟ್ಟ ಗಾಯಗಳಿಂದಾಗಿ ಭಾಗ್ಯಶ್ರಿ ನ.24 ರಂದು  ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿ ದ್ದಾಳೆ. ಈಕೆಯ ಸಾವಿನ ಬಗ್ಗೆ ಅನು ಮಾನವಿದೆ ಎಂದು ನಂದಗಡ ಠಾಣೆಗೆ  ದೂರು ನೀಡಲು ಹೋಗಿದ್ದ ಸಂದರ್ಭ ದಲ್ಲಿ ಪೊಲೀಸರು ದೂರು ಪಡೆಯದೇ ತಮ್ಮನ್ನು ಮರಳಿ ಕಳುಹಿಸಿದ್ದಾರೆ ಎಂದು ಲಕ್ಷ್ಮಣ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.