ಸವದತ್ತಿ: ‘ಕಾಲ್ಪನಿಕ ವೇತನ ಎನ್ನುವುದು ಅನುದಾನಿತ ಶಾಲೆಗಳ ಶಿಕ್ಷಕರ ಪಾಲಿಗೆ ಶಾಪವಾಗಿದೆ. ಅದೊಂದು ಮರಣಶಾಸನವಾಗಿದೆ’ ಎಂದು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ರಾಮು ಗುಗ್ಗವಾಡ ಹೇಳಿದರು.
ಇಲ್ಲಿನ ನೌಕರರ ಸಂಘದಲ್ಲಿ ಮಂಗಳವಾರ ನಡೆದ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಭೆಯಲ್ಲಿ ಮಾತನಾಡಿದರು.
‘1987ರಲ್ಲಿ ಒಬ್ಬ ಶಿಕ್ಷಕ ಸಂಬಳದಲ್ಲಿ ಶೇ. 3ರಷ್ಟು ಹಣ ಭರಿಸಿಕೊಂಡು, ಎಲ್ಲ ಸೌಕರ್ಯ ಕೊಡಬೇಕು ಎಂಬ ನಿಯಮ ಹೇಳಲಾಗಿತ್ತು. ಆದರೆ ಅದನ್ನು ಮರಳಿ ಪಡೆಯುವ ಮೂಲಕ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದರು’ ಎಂದು ತಿಳಿಸಿದರು.
‘ಪ್ರಮುಖ ಬೇಡಿಕೆಗಳಾದ ಸಾರ್ವತ್ರಿಕ ವಿಮೆ, ವೈದ್ಯಕೀಯ ಭತ್ಯೆ ಜಾರಿಯಾಗಿದೆ. ಬಡ್ತಿ ಶಿಕ್ಷಕರ ಸಮಸ್ಯೆಗೆ ಜ.3ರಂದು ಶಿಕ್ಷಣ ಸಚಿವರು ಬಡ್ತಿ ಆದೇಶ ಮಾಡಿದ್ದಾರೆ. ಆದರೆ, ಇನ್ನೂ ಜಾರಿಯಾಗಿಲ್ಲ. ಪದವಿಪೂರ್ವ ಕಾಲೇಜಾಗಿ ಬೇರ್ಪಟ್ಟಲ್ಲಿ, 750 ವಿದ್ಯಾರ್ಥಿಗಳ ಹಾಜರಾತಿ ಹೊಂದಿದ ಕಾಲೇಜಿಗೆ ಒಬ್ಬ ಮುಖ್ಯೋಪಾಧ್ಯಾಯ, ಸಹಪ್ರಾಚಾರ್ಯರು ಇರಬೇಕು ಎನ್ನುವ ನಿಯಮವಿದೆ. ಆದರೆ, 12 ಹುದ್ದೆಗಳು ಖಾಲಿ ಇವೆ’ ಎಂದು ದೂರಿದರು.
ಜಿಲ್ಲಾಧ್ಯಕ್ಷ ಎಸ್.ಎಸ್. ಬಳಿಗಾರ, ಜಿಲ್ಲಾ ಗೌರವಾಧ್ಯಕ್ಷ ಎಸ್.ಬಿ. ತಲ್ಲೂರ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಗಾಣಿಗೇರ ಮಾತನಾಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಬಿ. ನಾವಲಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ಕರಿಗಾರ ಸ್ವಾಗತಿಸಿದರು. ಎಸ್.ಬಿ. ಕರಲಿಂಗಪ್ಪನವರ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.