ADVERTISEMENT

ವಂಚಕನ ಬಂಧನಕ್ಕೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 7:00 IST
Last Updated 14 ಸೆಪ್ಟೆಂಬರ್ 2011, 7:00 IST

ಬೆಳಗಾವಿ: “ಸರ್ಕಾರಿ ಯೋಜನೆಗಳನ್ನು ಮಂಜೂರು ಮಾಡಿಸುವುದಾಗಿ ಸಣ್ಣ ರೈತರಿಂದ ಹಣ ಪಡೆದು ವಂಚಿಸು ತ್ತಿರುವ ಗೋಕಾಕ ತಾಲ್ಲೂಕಿನ ಪಟಗುಂದಿ ಗ್ರಾಮದ ವ್ಯಕ್ತಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು” ಎಂದು ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ರೈತ ದಾದಪ್ಪ ಮರೆಪ್ಪ ಮುನ್ನೊಳ್ಳಿ ಜಿಲ್ಲಾಧಿಕಾರಿ ಗಳನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮಂಗಳವಾರ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಡಾ. ಏಕರೂಪ ಕೌರ್‌ಗೆ ಮನವಿ ಸಲ್ಲಿಸಿರುವ ಅವರು, “ಗೋಕಾಕ ತಾಲ್ಲೂಕಿನ ಪಟಗುಂದಿ ಗ್ರಾಮದ ಪದ್ಮಾಕರ ಅಲಿಯಾಸ್ ಗುಂಡಪ್ಪ ಅಣ್ಣಪ್ಪ ಕಮತೆ ಎಂಬ ವ್ಯಕ್ತಿಯು ಗೋಕಾಕ ಹಾಗೂ ಹುಕ್ಕೇರಿ ತಾಲ್ಲೂಕುಗಳಲ್ಲಿ ಸಾಲ ಮನ್ನಾ ಯೋಜನೆ ವಂಚಿತ ಸಣ್ಣ ರೈತರಿಗೆ ಸಾಲ ಮನ್ನಾ ಮಾಡಿಸು ವುದಾಗಿ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾನೆ” ಎಂದು ಆರೋಪಿಸಿದ್ದಾರೆ.

“ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಸಾಲ ಮನ್ನಾ ಯೋಜನೆಯಿಂದ ಹಲವು ರೈತರು ನೆಮ್ಮದಿಯಿಂದ ಬಳಲುವಂತಾಗಿದೆ. ಆದರೆ ಈ ಯೋಜನೆಯಿಂದ ಎಷ್ಟೋ ರೈತರು ವಂಚಿತರಾಗಿದ್ದಾರೆ. ಸಾಲ ಮನ್ನಾ ಮಾಡಿಸಲು ಅಧಿಕಾರಿಗಳಿಗೆ ಲಂಚ ನೀಡಿದರೆ, ನಿಮ್ಮ ಸಾಲವನ್ನೂ ಮನ್ನಾ ಮಾಡಿಸಲು ಸಾಧ್ಯ ಎಂದು ಆತ ಸುಮಾರು 20ಕ್ಕೂ ಹೆಚ್ಚು ಸಣ್ಣ ರೈತರನ್ನು ನಂಬಿಸಿ ಹಣ ಸುಲಿಗೆ ಮಾಡಿದ್ದಾನೆ” ಎಂದು ದೂರಿದ್ದಾರೆ.

“ಬೆಳೆ ಸಾಲ ತೆಗೆದುಕೊಂಡು ಸಾಲದ ಹೊರೆ ಹೊತ್ತುಕೊಂಡಿದ್ದ ರೈತರಿಂದ ಪದ್ಮಾಕರ ಹಣ ತೆಗೆದುಕೊಂಡು ಮತ್ತಷ್ಟು ಸಾಲದ ಹೊರೆಯನ್ನು ಹೆಚ್ಚುವಂತೆ ಮಾಡಿದ್ದಾರೆ. ಸಾಲ ಮನ್ನಾವೂ ಆಗಿಲ್ಲ. ನಾವು ನೀಡಿದ ಹಣವನ್ನೂ ವಾಪಸ್ ನೀಡುತ್ತಿಲ್ಲ. ಬೆಳೆಗೆ ಸೂಕ್ತ ಬೆಲೆ ಸಿಗದೇ ರೈತರು ಸಂಕಷ್ಟದಲ್ಲಿರುವ ಸಂದ ರ್ಭದಲ್ಲಿ ಮೋಸ ಮಾಡಿರುವುದರಿಂದ ನಾವು ಕಂಗಾಲಾಗಿದ್ದೇವೆ” ಎಂದು ಮುನ್ನೊಳ್ಳಿ ತಿಳಿಸಿದ್ದಾರೆ.

“ಸರ್ಕಾರದ ಯೋಜನೆಯ ಹೆಸರಿನಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೈತರು ವಂಚನೆಗೊ ಳಗಾಗುವುದನ್ನು ತಪ್ಪಿಸಲು ಈತನನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಹಣ ನೀಡಿ ವಂಚನೆಗೊಳಗಾಗಿರುವ ಅರಬಾವಿಮಠದ ಬಾಳಪ್ಪ ರಾಮಪ್ಪ ಕಾಳಪ್ಪಗೋಳ, ಮಾರುತಿ ಬಾಳಪ್ಪ ಹೂಗಾರ, ದುಂಡಪ್ಪ ಚನ್ನಪ್ಪ ಕುಂದರಗಿ, ಸುರಪುರದ ರಾಮಪ್ಪ ಕಲ್ಲಪ್ಪ ಪಾಟೀಲ, ಮೂಡಲಗಿಯ ಡಾ. ಪ್ರಕಾಶ ಶಿವಪ್ಪ ನಿಡಗುಂದಿ, ಅರಬಾವಿಯ ಯಮನವ್ವ ಲಕ್ಷ್ಮಣ ಹೊನಕುಪ್ಪಿ, ಮಾಡಂಗೇರಿಯ ಮುತ್ತೆವ್ವ ಹರಿಜನ ಈ ಸಂದರ್ಭದಲ್ಲಿ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.