ADVERTISEMENT

ವಿಟಿಯು ಹಗರಣ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 8:45 IST
Last Updated 12 ಫೆಬ್ರುವರಿ 2011, 8:45 IST

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆರಂಭದಿಂದ ಇಲ್ಲಿಯವರೆಗೆ ಆಗಿರುವ ಎಲ್ಲ ಹಗರಣಗಳ ಬಗೆಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ವಿನಯ ಬಿದರೆ ಎಚ್ಚರಿಸಿದರು.

ವಿಟಿಯುನಲ್ಲಿ ನಡೆದಿರುವ ಛಾಲೆಂಜಿಂಗ್ ಹಗರಣ ವಿರುದ್ಧ ಎಬಿವಿಪಿ ಕಳೆದ ಎರಡು ವರ್ಷದಿಂದ ಹೋರಾಟ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಈ ವಿಚಾರದಲ್ಲಿ ದಿವ್ಯ ನಿರ್ಲಕ್ಷವಹಿಸಿದೆ ಎಂದು ಆರೋಪಿಸಿದ ಅವರು, ‘ವಿದ್ಯಾರ್ಥಿಗಳ ಹಿತರಕ್ಷಣೆ ದೃಷ್ಟಿಯಿಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು’ಎಂದು ಆಗ್ರಹಿಸಿದರು.

‘ಡಾ.ಎಚ್. ಮಹೇಶಪ್ಪ ನೇಮಕ ಸಂದರ್ಭದಲ್ಲಿ ಸರಿಯಾಗಿ ದಾಖಲೆ ಗಳನ್ನು ಸರಿಯಾಗಿ ಪರಿಶೀಲಿಸದೇ ಅವರ ಹೆಸರನ್ನು ಶಿಫಾರಸ್ಸು ಮಾಡಿದ ಸಮಿತಿಯ ಸದಸ್ಯರು ಸೇರಿದಂತೆ ವಿಶ್ವವಿದ್ಯಾಲಯದಲ್ಲಿ ಇಲ್ಲಿಯವರೆಗೆ ಹಗರಣಗಳಿಗೆ ಕಾರಣರಾದ ಎಲ್ಲರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಛಾಲೆಂಜಿಂಗ್ ಮರು ಮೌಲ್ಯ ಮಾಪನ ತನಿಖಾ ಸಮಿತಿಯಲ್ಲಿ ಈ ಹಿಂದೆ ಕುಲಪತಿಗಳಾಗಿದ್ದವರು, ಈಗ ಪ್ರಾಚಾರ್ಯರಿರುವವರನ್ನು ನೇಮಕ ಮಾಡಿದ ಬಗೆಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ತನಿಖಾ ಸಮಿತಿಯಲ್ಲಿ ಅನರ್ಹರು ಇರಬಾರದು. ಕೂಡಲೇ ಅಂತಹವರನ್ನು ಬದಲಾವಣೆ ಮಾಡಬೇಕು. ಒಟ್ಟಿನಲ್ಲಿ ಜನರ ಮುಂದೆ ಸತ್ಯಾಂಶ ಹೊರಬರಬೇಕು ಎಂದು ಎಬಿವಿಪಿ ನಿಲುವಾಗಿದೆ’ ಎಂದು ಶುಕ್ರವಾರ ಅವರು ಹೇಳಿದರು.

‘ಸುಳ್ಳು ದಾಖಲೆಗಳನ್ನು ಸಲ್ಲಿಸಿರುವ ಮಹೇಶಪ್ಪ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸೋಮವಾರದಂದು ವಿಟಿಯು ಮುಖ್ಯ ಕಚೇರಿ ಸೇರಿದಂತೆ ಪ್ರಾದೇಶಿಕ ಕೇಂದ್ರಗಳ ಮುಂದೆಯೂ ಪ್ರತಿಭಟನೆ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.