ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಅಂಗನವಾಡಿ ಕಾರ್ಯಕರ್ತೆಯರ ಧರಣಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 6:47 IST
Last Updated 1 ಡಿಸೆಂಬರ್ 2017, 6:47 IST

ಗೋಕಾಕ: ಬಾಲವಿಕಾಸ ಸಮಿತಿ ಜಂಟಿ ಬ್ಯಾಂಕ್‌ ಖಾತೆ ತೆರೆಯುವ ಆದೇಶವನ್ನು ವಿರೋಧಿಸಿ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಪ್ರತಿಭಟನೆ ನಡೆಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಗುರುವಾರ ಸಂಜೆ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸೇರಿದ ಅಂಗನವಾಡಿ ಕಾರ್ಯಕರ್ತೆಯರು ಸಿಡಿಪಿಒ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಿಡಿಪಿಒ ಅರುಣ ನೀರಗಟ್ಟಿ ಅವರಿಗೆ ಮನವಿ ಅರ್ಪಿಸಿದರು.

ಬಾಲವಿಕಾಸ ಸಮಿತಿ ಅಧ್ಯಕ್ಷರ ಜೊತೆ ಜಂಟಿ ಖಾತೆ ತೆರೆಯಲು ಹೇಳಲಾಗುತ್ತಿದೆ. ಈ ಹಿಂದೆ ಇಂಥದೇ ಆದೇಶದ ಪ್ರಕಾರ ಜಂಟಿ ಖಾತೆ ತೆರೆದಾಗ ಹಲವಾರು ಸಮಸ್ಯೆಗಳು ಉದ್ಭವಿಸಿವೆ. ಪುನಃ ಅದೇ ರೀತಿ ಘಟನೆ ಮರುಕಳಿಸುವುದು ಬೇಡ. ಹಿಂದಿನ ಪದ್ಧತಿಯೇ ಮುಂದುವರಿಸಬೇಕು, ತರಕಾರಿ, ಅಡುಗೆ ಅನಿಲಕ್ಕೆ ಮುಂಚಿತವಾಗಿ ಕಾರ್ಯಕರ್ತೆಯರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಬೇಕು, ಅಡುಗೆ ಸಲಕರಣೆ ಹಾಗೂ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಂಗನವಾಡಿ ದಾಖಲೆಗಳ ಹೊರೆ ಕಡಿಮೆ ಮಾಡಬೇಕು, ಪ್ರತಿ ತಿಂಗಳು 5ನೇ ತಾರೀಕಿನ ಒಳಗಾಗಿ ಗೌರವಧನ ಬಿಡುಗಡೆ ಮಾಡಬೇಕು, ನಿವೃತ್ತಿಯಾದ ಅಂಗನವಾಡಿ ಸಿಬ್ಬಂದಿಗೆ ನಿವೃತ್ತಿ ಹಣ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಮರಣ ಹೊಂದಿದವರಿಗೆ ಪರಿಹಾರ ಧನ ಬಿಡುಗಡೆ ಮಾಡಬೇಕು, ಗುಣಮಟ್ಟದ ಆಹಾರ ಸರಿಯಾಗಿ ಸರಬರಾಜು ಆಗಬೇಕು ಸೇರಿದಂತೆ ಒಟ್ಟು 17 ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ದೊಡ್ಡವ್ವ ಪೂಜೇರಿ, ಕಾರ್ಯದರ್ಶಿ ಮುನೀರಾ ಮುಲ್ಲಾ, ಖಜಾಂಚಿ ಕಲ್ಲಪ್ಪ ಮಾದರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.