ADVERTISEMENT

ಶಾಸಕರಿಂದ ಮತದಾರರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 5:20 IST
Last Updated 24 ಜೂನ್ 2013, 5:20 IST

ಬೈಲಹೊಂಗಲ: `ಮತದಾರರು ನೇರ ವಾಗಿ ಭೇಟಿಯಾಗಿ ಸಮಸ್ಯೆಗಳನ್ನು ನನ್ನ ಗಮನಕ್ಕೆ ತರುವ ಮೂಲಕ ಸಮಸ್ಯೆಗಳ ನಿವಾರಣೆಗೆ ಸಹಕರಿಸಬೇಕು' ಎಂದು ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಭಾನುವಾರ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕಿನ ಮತದಾರರಿಗೆ ಏರ್ಪಡಿಸಿದ `ಅಭಿನಂದನಾ ಸಮಾರಂಭ'ದಲ್ಲಿ ಸೇರಿದ ಅಪಾರ ಜನಸಮೂಹವನುದ್ದೇಶಿಸಿ ಮಾತನಾಡಿದರು. `ಕಳೆದ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂಬುದನ್ನು ಪ್ರಜ್ಞಾವಂತ ಮತದಾರರು ತೋರಿಸಿಕೊಟ್ಟಿದ್ದು,

ಎಲ್ಲ ಧರ್ಮ, ಜಾತಿಯ ಜನರ ಆಶೀರ್ವಾದದೊಂದಿಗೆ ನಾನು ಶಾಸಕ ನಾಗಿದ್ದೇನೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದರ ಜೊತೆಗೆ, ನೆನೆಗುದಿಗೆ ಬಿದ್ದಿರುವ ಹಾಗೂ ಅವಶ್ಯಕವಿರುವ ಹೊಸ ನೀರಾವರಿ ಯೋಜನೆಗಳ ಜಾರಿಗೊಳಿಸಲು ಹೆಚ್ಚಿನ ಕಾಳಜಿ ವಹಿಸುವುದಾಗಿ ಹೇಳಿದರು. ಕಳಸಾ ಬಂಡೂರಿ ಜೋಡಣಾ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದರು.

ನಿರುದ್ಯೋಗ ನಿವಾರಣೆಗೆ ಗುಡಿ ಕೈಗಾ ರಿಕೆಗಳ ಆರಂಭ, ಕೃಷಿ ಹಾಗೂ ಕಾರ್ಮಿಕ ವರ್ಗಗಳ ಕಲ್ಯಾಣಕ್ಕೆ ವಿಶೇಷ ಕಾಳಜಿ. ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆ ಗೇರಿಸಿ ನುರಿತ ತಜ್ಞ ವೈದ್ಯರ ನೇಮಕಾತಿ, ವೀರರಾಣಿ ಕಿತ್ತೂರ ಚನ್ನಮ್ಮಾ ಸಮಾಧಿ ಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಲು ಬೇಕಾದ ಅವಶ್ಯಕ ಕ್ರಮಗಳನ್ನು ಕೇಂದ್ರ ಸರ್ಕಾರದಿಂದ ಮಂಜೂರ ಮಾಡಿಸುವು ದಾಗಿ ಹೇಳಿದರು. 

ಕಿತ್ತೂರ, ಬೆಳವಡಿ ಹಾಗೂ ಸಂಗೊಳ್ಳಿ ಉತ್ಸವಗಳನ್ನು ಸಾರ್ವಜನಿಕ ಉತ್ಸವ ವಾಗಿ ಆಚರಿಸಲು ಕ್ರಮ, ಮತಕ್ಷೇತ್ರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದರು. ಸಮಸ್ಯೆಗಳ ಕುರಿತು ಪ್ರತಿ ತಿಂಗಳು ಜನರೊಂದಿಗೆ ಸಭೆ ನಡೆಸಿ, ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಎಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಚನ್ನಮ್ಮಾಜಿ ಪುತ್ಥಳಿಯನ್ನು ಸರ್ಕಲ್‌ದಲ್ಲಿ ಪ್ರತಿಷ್ಠಾಪನೆ ಮಾಡುವುದಾಗಿ ಹೇಳಿದರು.

ಸಾನ್ನಿಧ್ಯ ವಹಿಸಿದ್ದ ನಾಗನೂರು- ಬೆಳಗಾವಿ ರುದ್ರಾಕ್ಷಿಮಠ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಜನರ ಸೇವೆಯೇ ಭಗವಂತನ ಸೇವೆ ಎಂದು ತಿಳಿದುಕೊಂಡು ಕಾರ್ಯ ಮಾಡುವಂತೆ ಸಲಹೆ ಮಾಡಿದರು. ದಕ್ಷಿಣ ಕರ್ನಾಟಕ ಕ್ಕಿಂತ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಉತ್ತರ ಕರ್ನಾಟಕದ ಅಭಿವೃದ್ದಿಗೆ ಜಿಲ್ಲೆಯ ಶಾಸಕರು ಶ್ರಮಿಸಬೇಕು ಎಂದರು.

ಮುರಗೋಡ ನೀಲಕಂಠ ಸ್ವಾಮೀಜಿ ಮಾತನಾಡಿ, ನಲವತ್ತು ವರ್ಷಗಳ ಇತಿಹಾಸದಲ್ಲಿ ಮತದಾರರಿಗೆ ಅಭಿ ನಂದನೆ ಸಲ್ಲಿಸಿದ ಹೆಮ್ಮೆ ನೂತನ ಶಾಸಕ ಡಾ.ವಿಶ್ವನಾಥ ಪಾಟೀಲ ಅವರದ್ದಾಗಿದೆ ಎಂದರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬೈಲೂರ ನಿಜಗುಣಾನಂದ ಸ್ವಾಮೀಜಿ, ಮಲ್ಲೂರ ಓಂಕಾರ ಆಶ್ರಮದ ನಿಶ್ಚಲ ಸ್ವರೂಪ ಸ್ವಾಮೀಜಿ ಮಾತನಾಡಿದರು. ಈಶಪ್ರಭು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮ.ಮ.ಕಾಡೇಶನವರ ಡಾ.ವಿ.ಆಯ್. ಪಾಟೀಲ ನಡೆದು ಬಂದ ದಾರಿಯನ್ನು ವಿವರಿಸಿದರು.

ಶಿವಾನಂದಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಹೊಸೂರ ಮಡಿ ವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ಯಕ್ಕುಂಡಿ ಪಂಚಾಕ್ಷರಿ ಸ್ವಾಮೀಜಿ, ಮೂರುಸಾವಿರಮಠದ ನೀಲಕಂಠ ದೇವರು, ಜನಾಬ ಮೌಲಾನಾ ಮಹ್ಮದ ಇರ್ಶಾದ ಟಿರಗಿ, ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ.ಪ್ರಭಾಜಿ ಆಗಮಿಸಿದ್ದರು. ಅಧ್ಯಕ್ಷತೆ ಯನ್ನು ಬಸನಗೌಡ ಪಾಟೀಲ ವಹಿಸಿದ್ದರು.

ಶ್ರೀಶೈಲ ಯಡಳ್ಳಿ, ವಿ.ಆರ್.ಬಳಿಗಾರ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸಿ.ಆರ್. ಪಾಟೀಲ, ಮಹ್ಮಶಹಾ ನದಾಫ ಸೇರಿ ದಂತೆ ಹಲವಾರು ಗಣ್ಯರು ವೇದಿಕೆ ಯಲ್ಲಿದ್ದರು.

ಕೆಜೆಪಿ ಜಿಲ್ಲಾ ಅಧ್ಯಕ್ಷ ಬಾಳಿ, ಪಟ್ಟಣದ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ನೂತನ ಶಾಸಕರಿಗೆ ಹೂಮಾಲೆ ಅರ್ಪಿಸಿ ಅಭಿನಂದಿಸಿದರು.

ಜಾನಪದ, ದೂರದರ್ಶನ ಕಲಾವಿದ ಸಿ.ಕೆ.ಮೆಕ್ಕೇದ ಹಾಗೂ ಸುನೀಲ ಪತ್ರಿ ಅವರಿಂದ ಜರುಗಿದ ರಸಮಂಜರಿ ಕಾರ್ಯಕ್ರಮ ಕೇಳುಗರ ಗಮನ ಸೆಳೆ ಯಿತು. ಎಂ.ಎಲ್.ಪಾಟೀಲ ಸ್ವಾಗತಿ ಸಿದರು. ಎಂ.ಪಿ.ಉಪ್ಪಿನ ನಿರೂಪಿಸಿದರು. ಎಫ್. ಎಸ್.ಸಿದ್ದನಗೌಡ್ರ ವಂದಿಸಿದರು.

ಸಚಿವ ಸೊರಕೆ ಬೆಳಗಾವಿಗೆ
ಬೆಳಗಾವಿ: ನಗರಾಭಿವೃದ್ಧಿ ಖಾತೆ ಸಚಿವ ವಿನಯಕುಮಾರ್ ಸೊರಕೆ ಅವರು ಜೂನ್ 24ರಂದು ಬೆಳಗಾವಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.  ಸಚಿವರು ಬೆಳಿಗ್ಗೆ 9 ಗಂಟೆಗೆ ಬೆಳಗಾವಿಗೆ ಆಗಮಿಸಿ, ಬೆಳಿಗ್ಗೆ 10 ಗಂಟೆಗೆ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ಬುಡಾ ಸಭಾಂಗಣದಲ್ಲಿ ನಗರಾಭಿವೃದ್ಧಿ ಪ್ರಾಧಿ ಕಾರದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ನಂತರ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.