ADVERTISEMENT

ಸಂಪನ್ಮೂಲ ಸದ್ಬಳಕೆಯಿಂದ ಶಾಂತಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 8:00 IST
Last Updated 14 ಅಕ್ಟೋಬರ್ 2011, 8:00 IST

ಅಥಣಿ:  ಅಮೂಲ್ಯವಾಗಿರುವ ಮಾನವ ಸಂಪನ್ಮೂಲವನ್ನು ಸಕಾರಾತ್ಮಕವಾಗಿ ಬಳಸಿಕೊಂಡಲ್ಲಿ ಮಾತ್ರ ವಿಶ್ವದ ಪ್ರತಿಯೊಂದು ಮೂಲೆಯಲ್ಲೂ ಶಾಂತಿಯನ್ನು ಕಾಣಬಹುದಾಗಿದೆ ಎಂದು ಸುತ್ತೂರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಲಗೌಡ ಕಾಗೆ ಅವರ ಜನ್ಮ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಒಂದು ವೇಳೆ ಈ ಮಾನವ ಸಂಪನ್ಮೂಲವನ್ನು ದುರ್ಬಳಕೆ ಮಾಡಿಕೊಳ್ಳಲು ಹೊರಟರೆ ಜಗತ್ತು ವಿನಾಶದ ಅಂಚಿಗೆ ಸರಿಯುವುದು ನಿಶ್ಚಿತ.

ಅದಕ್ಕಾಗಿ ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಜಗತ್ತಿನ ಸರ್ವತೋಮುಖ ಒಳಿತಿಗಾಗಿ  ಯಾವಾಗಲೂ ಗುಣಾತ್ಮಕವಾಗಿ ಮಾತ್ರ ಚಿಂತನೆ ನಡೆಸುವದು ಇಂದಿನ ಅಗತ್ಯವಾಗಿದೆ ಎಂದರು.

ಗಾಂಧಿವಾದದ ಕೊನೆಯ ಕೊಂಡಿಯಾಗಿ ಬದುಕುಳಿದಿರುವ ಅಲಗೌಡ ಕಾಗೆ ಕಾಯಕದಿಂದ ನಾಯಕನಾಗಿ ಬೆಳೆದು ಬಂದಿರುವ ಪರಿಯನ್ನು ಬಿಡಿಸಿಟ್ಟ ಅವರು, ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ  ಕಾಗೆ ಅವರ ಅನುಭವ ಶ್ರೀಮಂತಿಕೆ ಮುಂದಿನ ಪೀಳಿಗೆಗೆ ನಿಜಕ್ಕೂ ಮಾರ್ಗದರ್ಶನವಾಗಲಿದೆ ಎಂದು ಹೇಳಿದರು.

ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ  ಸಿದ್ಧೇಶ್ವರ ಸ್ವಾಮೀಜಿ, ಈ ಶರೀರವೆಂಬ ತಂಬೂರಿಯಿಂದ 32 ಭಕ್ತಿ ರಸಗಳುಳ್ಳ ರಾಗವನ್ನು ಭಗವಂತ ನುಡಿಸಿದಾಗ ಮಾತ್ರ ಜೀವನ ಸಾರ್ಥಕವಾಗುವುದು ಎಂದರು. ಇಂಗ್ಲಿಷ್ ಕವಿ ವಿಲಿಯಂ ಷೇಕ್ಸ್‌ಪಿಯರ್ ಹೇಳಿದಂತೆ ಪ್ರತಿಯೊಬ್ಬ ವ್ಯಕ್ತಿ ತನ್ನ ಆತ್ಮದಲ್ಲಿ ತೃಪ್ತಿಯೆಂಬ ಕಿರೀಟವನ್ನು ಶಾಶ್ವತವಾಗಿ ಧರಿಸಿದಾಗ ಮಾತ್ರ ಜೀವನಕ್ಕೆ ಪರಿಪೂರ್ಣ ಅರ್ಥ ಬರುತ್ತದೆ ಎಂದರು.


ಬದುಕಿನ ಪ್ರತಿಯೊಂದು ಕ್ಷಣವನ್ನು ಆನಂದಿಸುವ ಜೊತೆಗೆ ತಮ್ಮ ದುಃಖ ಮತ್ತು ಸಂತಸವನ್ನು   ಇತರರೊಂದಿಗೆ ಹಂಚಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಕಷ್ಟಗಳು ಹಗುರಾಗುವ ಜೊತೆಗೆ ಸಂತಸದ ಅನುಭವ ಇಮ್ಮಡಿಯಾಗಲು ಸಾಧ್ಯವೆಂದರು.

ಕೊಲ್ಲಾಪುರ ಕಣೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ, ಸ್ಥಳೀಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಗಾರ ಖುರ್ದದ ಬಸವಲಿಂಗ ಸ್ವಾಮೀಜಿ, ಶೇಗುಣಸಿ ವಿರಕ್ತ ಮಠದ ಶಂಕರ ಸ್ವಾಮೀಜಿ, ಯಕ್ಸಂಬಾದ ವಿರೂಪಾಕ್ಷಲಿಂಗ ಸ್ವಾಮೀಜಿ, ಘೋಡಗೇರಿಯ ಮಲ್ಲಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಜ್ಞಾನಾನಂದಪುರಿ ಸ್ವಾಮೀಜಿ, ಚನ್ನ ಮಲ್ಲಿಕಾರ್ಜುನ ಸ್ವಾಮೀಜಿ, ಡಾ. ಶ್ರದ್ಧಾನಂದ ಸ್ವಾಮೀಜಿ, ಮಹೇಶಾ ನಂದ ಸ್ವಾಮೀಜಿ, ಪ್ರಸಾದಲಿಂಗ ಸ್ವಾಮೀಜಿ, ಬಸವೇಶ್ವರ ಸ್ವಾಮೀಜಿ, ಶಿವದೇವ ಸ್ವಾಮೀಜಿ, ಹಿರೇಮಲ್ಲಿ ಕಾರ್ಜುನ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಸಮ್ಮುಖ ವಹಿಸಿದ್ದರು.

ಉಗಾರ ಶುಗರ್ಸ್‌ ಅಧ್ಯಕ್ಷ ರಾಜಾಬಾಹು ಶಿರಗಾಂವಕರ, ಶಿವಗೌಡ ಕಾಗೆ, ಪ್ರಕಾಶ ಅವಳೆ ಮಾತನಾಡಿದರು.
ಸಚಿವ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಅಭಯ ಪಾಟೀಲ, ಸಂಜಯ ಪಾಟೀಲ, ಎಸ್.ಕೆ. ಬೆಳ್ಳುಬ್ಬಿ, ಸಾರ್ವಭೌಮ ಬಗಲಿ, ಶ್ಯಾಮ ಘಾಟಗೆ, ವೀರಕುಮಾರ ಪಾಟೀಲ, ಮುಖಂಡರಾದ ಷಹಜಹಾನ್ ಡೊಂಗರಗಾಂವ, ಎ.ಬಿ ಪಾಟೀಲ,
 

ಶಶಿಕಾಂತ ನಾಯಿಕ, ಶಿವಾನಂದ ಕೌಜಲಗಿ, ಬಿ.ಆರ್. ಸಂಗಪ್ಪಗೋಳ, ಕಲ್ಲಪ್ಪ ಮಗೆಣ್ಣವರ, ಜ್ಯೋತಗೌಡ ಪಾಟೀಲ, ಗಜಾನನ ಯರಂಡೋಲಿ, ಮಹೇಶ ಕುಮಠಳ್ಳಿ, ಶೀತಲ ಪಾಟೀಲ, ವಿನಾಯಕ ಬಾಗಡಿ, ರವೀಂದ್ರ ಪೂಜಾರಿ, ನಿಂಗಪ್ಪ ಖೋಕಲೆ ಸೇರಿದಂತೆ ಹಲವಾರು ಧುರೀಣರು ಉಪಸ್ಥಿತರಿದ್ದರು.  ಅಲಗೌಡ ಕಾಗೆ ಅವರ ಜೀವನ ಚರಿತ್ರೆ `ಪೂರ್ಣಕುಂಭ~ ಎಂಬ ಸಂಕಲನ ವನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿಹಿ ತಿಂಡಿಯಿಂದ ಅಲಗೌಡ ಕಾಗೆಯವರ ತುಲಾಭಾರ ನೆರವೇರಿಸಲಾಯಿತು. ಕಾಗವಾಡ ಶಾಸಕ ರಾಜು ಕಾಗೆ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT