ರಾಯಬಾಗ: ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಆದ್ದರಿಂದ ಘಟಪ್ರಭಾ ಎಡದಂಡೆ ಕಾಲುವೆಗೆ ಹಿರಣ್ಯಕೇಶಿ ನದಿಯ ನೀರು ಹರಿಸಿ ಹುಲ್ಯಾಳ ಕೆರೆಯನ್ನು ತುಂಬಿಸುವಂತೆ ಪಟ್ಟಣ ಪಂಚಾಯಿತಿ ಸದಸ್ಯರು ಒತ್ತಾಯಿಸಿದ್ದಾರೆ.
ಬುಧವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತುರ್ತು ಸಭೆಯಲ್ಲಿ ಸದಸ್ಯರು ಪತ್ರಕರ್ತರಿಗೆ ವಿವರಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಚಂದು ಕೋರೆ ಮಾತನಾಡಿ, ಜಿಲ್ಲಾಡಳಿತ ಹಾಗೂ ಸರ್ಕಾರ ಈ ಕೂಡಲೇ ಕೆರೆಗೆ ನೀರನ್ನು ಹರಿಸಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ವಿರುದ್ಧ ರಾಯಬಾಗ ಬಂದ್ ಆಚರಿಸಿ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಚಂದು ಬುರುಡ, ಬಿ.ಎಸ್.ಗಡ್ಡೆ, ಶಂಕರ ನಾಯಿಕ, ಮಾಜಿ ಉಪಾಧ್ಯಕ್ಷ ಶಾಂತಿನಾಥ ಶೆಟ್ಟಿ ಮಾತನಾಡಿ, ಪಟ್ಟಣ ದಲ್ಲಿ ಕುಡಿಯವ ನೀರಿನ ಸಮಸ್ಯೆ ದಿನ ದಿಂದ ದಿನಕ್ಕೆ ಹೆಚ್ಚುತ್ತಿದೆ. 20 ಸಾವಿರ ಜನಸಂಖ್ಯೆಗೆ ಪ್ರತಿದಿನ 40 ಲಕ್ಷ ಲೀಟರ ನೀರು ಬೇಕು. ಆದರೆ ಸದ್ಯ 3.5 ಲಕ್ಷ ಲೀಟರ ಮಾತ್ರ ಪೂರೈಸುತ್ತಿದ್ದೆವೆ. ಆದ್ದರಿಂದ ಸಹಕಾರ ಧುರೀಣ ವಿವೇಕರಾವ್ ಪಾಟೀಲರ ಮಾರ್ಗ ದರ್ಶನದಲ್ಲಿ ಪಟ್ಟಣದಲ್ಲಿ ಕೊಳವೆ ಬಾವಿಗಳ ಮೂಲಕ ಮತ್ತು ಟ್ಯಾಂಕರ್ ಮೂಲಕ ಪಟ್ಟಣದ ಜನತೆಗೆ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದರು.
ಒಂದು ವೇಳೆ ಹುಲ್ಯಾಳ ಕೆರೆಗೆ ನೀರು ತುಂಬಿಸಿದರೆ ನೀರಿನ ದುರುಪಯೋಗ ವಾಗದಂತೆ ಮತ್ತು ರೈತರ ಪಂಪ್ಸೆಟ್ಗಳನ್ನು ಸ್ಥಗಿತಗೊಳಿಸುವಂತೆ ಸದಸ್ಯರು ಸಲಹೆ ಮಾಡಿದರು. ಎಂಜಿನಿಯರ್ ಎಸ್.ಆರ್.ಚೌಗಲಾ ಮತ್ತು ಮಹಾವೀರ ಸಾನೆ ಮಾತನಾಡಿದರು.
ಮುಖ್ಯಾಧಿಕಾರಿ ಅರಬಳ್ಳಿ ಸ್ವಾಗತಿಸಿ ದರು. ಹನಮಂತ ಸಾನೆ, ಬಿ.ಎಸ್.ಗಡ್ಡೆ, ಮುನಾವರ ಮುಲ್ಲಾ, ಶಂಕರ ನಾಯ್ಕ, ಕಿರಣ ಕಂಬಳೆ, ಜಾವಿದ್ ಮೋಮಿನ್, ರಾಜು ಬಾಕರೆ, ಭೂಪಾಲ ಮಾನೆ, ನಿಂಗಪ್ಪ ಪೂಜಾರಿ ಮತ್ತು ಲಕ್ಷ್ಮಣ ಪಾಟೀಲ ಉಪಸ್ಥಿತರಿದ್ದರು.
ನೀರು ಬಿಡುಗಡೆ
ಘಟಪ್ರಭಾ ಎಡದಂಡೆ ಕಾಲುವೆಗೆ ಹಿರಣ್ಯ ಕೇಶಿ ನದಿಯಿಂದ ನೀರ ನ್ನು ಬಿಟ್ಟಿದ್ದು ಸದರಿ ಕಾಲುವೆ ನೀರು ತಾಲ್ಲೂಕಿನ ಮುಗಳಕೋಡದವರೆಗೆ ತಲುಪಿದೆ. ಆದ್ದರಿಂದ ತಾಲ್ಲೂಕಿನ ರೈತರು ಕಾಲುವೆ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸದೆ ಕುಡಿಯುವ ಉದ್ಧೇಶಕ್ಕೆ ಹಾಗೂ ದನಕರುಗಳಿಗೆ ಕುಡಿಯುವು ದಕ್ಕಾಗಿ ಮಾತ್ರ ಉಪಯೋಗಿಸುವಂತೆ ಕುಡಚಿ ಶಾಸಕ ಎಸ್.ಬಿ.ಘಾಟಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.