ಬೈಲಹೊಂಗಲ: ‘ತಾಲ್ಲೂಕಿನ ಕಡೆಯಂಚಿನ ಹಳ್ಳಿ ವನ್ನೂರು ಗ್ರಾಮ ಭಕ್ತಿ, ಭಾವೈಕ್ಯಕ್ಕೆ ಹೆಸರಾಗಿದೆ. ನಿತ್ಯ ಹಲವಾರು ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಗಳಿಂದ ಇಲ್ಲಿನ ಜನರು ನೆಮ್ಮದಿ ಕಾಣುವಂತಾಗಿದೆ’ ಎಂದು ಮುರಗೋಡ ಮಹಾಂತ ದುರದುಂಡೇಶ್ವರ ಮಠದ ಪೀಠಾಧಿಪತಿ ನೀಲಕಂಠ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ವನ್ನೂರು ಗ್ರಾಮದಲ್ಲಿ ನಡೆದ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಹೋಮ, ಮಹಾಪೂಜೆ, ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
‘ಜಾತ್ರಾ ಮಹೋತ್ಸವಗಳು ಗ್ರಾಮದ ಜನರ ಸಹಬಾಳ್ವೆಗೆ ಕಾರಣವಾಗಲಿವೆ. ಜಾತ್ರೆಯ ನೆಪದಲ್ಲಿ ದುಂದು ವೆಚ್ಚ ಮಾಡದೇ ಅದಕ್ಕೆ ಕಡಿವಾಣ ಹಾಕಿ ವಿಧಾಯಕ ಕಾರ್ಯಗಳಿಗೆ ಹಣ ವಿನಿಯೋಗ ಮಾಡಬೇಕು’ ಎಂದರು.
ಹಣಬರಹಟ್ಟಿ ಕೆಳದಿ ಮಠದ ಬಸವಲಿಂಗ ಶಿವಾಚಾರ್ಯ ಪಟ್ಟದೇವರು ಮಾತನಾಡಿ, ‘ಯುವಕರು ಯಾವದೇ ಸಂಘರ್ಷಕ್ಕೆ ಒಳಗಾಗದೇ ದೇವಿಯ ಸೇವೆ ಮಾಡಿ ಕೃತಾರ್ಥರಾಗಬೇಕು’ ಎಂದರು.
ಜಾತ್ರಾ ಮಹೋತ್ಸವ ಕಮಿಟಿ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ನೇತೃತ್ವದಲ್ಲಿ ಜಾತ್ರೆಯ ಅಂಗವಾಗಿ ಪೂರ್ಣಕುಂಭ ಮೇಳ, ದೇವಸ್ಥಾನದಲ್ಲಿ ಹೋಮ, ಗ್ರಾಮಸ್ಥರಿಂದ ಉಡಿ ತುಂಬುವ ಕಾರ್ಯಕ್ರಮಗಳು ಜರುಗಿದವು. ಮುಂಜಾನೆ ದೇವಿಯರಿಗೆ ಹಾಗೂ ಗ್ರಾಮದ ವಿವಿಧ ದೇವಸ್ಥಾನದಲ್ಲಿನ ಮೂರ್ತಿಗಳಿಗೆ ವಿಶೇಷ ಪೂಜೆ, ಪ್ರಾರ್ಥನೆ ನಡೆದವು.
ಗ್ರಾಮದಲ್ಲೆಡೆ ಸಾರೋಟಿನಲ್ಲಿ ಸ್ವಾಮೀಜಿ ಮೆರವಣಿಗೆ ನಡೆಯಿತು. ರಾತ್ರಿ, ಗ್ರಾಮದ ರೇಣುಕಾದೇವಿ ನಾಟ್ಯ ಸಂಘದ ಕಲಾವಿದರಿಂದ ‘ಬಡವನ ಒಡಲು ಬೆಂಕಿಯ ಸಿಡಿಲು’ ನಾಟಕ ಪ್ರದರ್ಶನವಾಯಿತು.
ಸುತಗಟ್ಟಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಹೊನ್ನನಾಯ್ಕ ಪಾಟೀಲ, ಮಲ್ಲನಗೌಡ ಪಾಟೀಲ, ಬಸಲಿಂಗಪ್ಪ ಬಸೆಟ್ಟಿ, ಯಲ್ಲಪ್ಪ ಪಾಟೀಲ, ನಾಗಪ್ಪ ಬಸೆಟ್ಟಿ, ಭೀಮಪ್ಪ ಸೋಮನಟ್ಟಿ, ಹಣಮಂತಪ್ಪ ದೊಡ್ಡನ್ನವರ, ಮನೋಜ ಕೆಳಗೇರಿ, ಪ್ರಕಾಶ ಕಿರಗಿ, ಅರ್ಚಕ ವೀರಭದ್ರಪ್ಪ ಬಡಿಗೇರ, ನನ್ನಿಗೆಂಪ್ಪ ಅಡಿವೇರ, ಅಜ್ಜಪ್ಪ ಕೂಗನವರ, ಅವಣ್ಣಾ ಕಸಳ್ಳಿ, ಬಸವರಾಜ ಶೇಬನ್ನವರ, ರುದ್ರಗೌಡಾ ಪಾಟೀಲ, ಶಿವಾನಂದ ಹೊಸಮನಿ, ಶಂಕರ ಗಾಣಿಗೇರ, ಸಿದ್ದಪ್ಪ ಕಡಬಿ ವೀರನಗೌಡಾ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.