ಬೆಳಗಾವಿ: ‘ಕೇಂದ್ರ ಸರ್ಕಾರವು ವೈದ್ಯಕೀಯ ಶಿಕ್ಷಣ ನೀತಿಯಲ್ಲಿ ಪರಿಣಾಮಕಾರಿ ಬದಲಾವಣೆ ತಂದಿದೆ. ದಶಕದ ಹಿಂದೆ ವರ್ಷಕ್ಕೆ 51 ಸಾವಿರ ವೈದ್ಯರು ರೂಪುಗೊಂಡರೆ, ಈಗ ಅವರ ಸಂಖ್ಯೆ 1.08 ಲಕ್ಷಕ್ಕೂ ಹೆಚ್ಚಾಗಿದೆ. ದೇಶ ಆರೋಗ್ಯವಾಗಿದೆ’ ಎಂದು ಕೇಂದ್ರ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ ಸಚಿವ ಜೆ.ಪಿ.ನಡ್ಡಾ ಹೇಳಿದರು.
ಇಲ್ಲಿನ ಜೆ.ಎನ್.ವೈದ್ಯಕೀಯ ಮಹಾವಿದ್ಯಾಲಯದ ಶತಮಾನೋತ್ಸವ ಭವನದಲ್ಲಿ ಮಂಗಳವಾರ ನಡೆದ ಕೆಎಲ್ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಕಾಹೆರ್) 15ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ನರೇಂದ್ರ ಮೋದಿ ಅವರ ಸರ್ಕಾರ ಬಂದ ಬಳಿಕ ಮೊದಲ ಕ್ರಾಂತಿ ವೈದ್ಯಕೀಯ ಶಿಕ್ಷಣದಲ್ಲೇ ನಡೆದಿದೆ’ ಎಂದರು.
‘ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಮತ್ತು ರೋಗ ನಿವಾರಿಸುವ ವಿಧಾನಗಳಿಗೆ ಹೊಸ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಹಿಂದೆ ಭಾರತದ ಪ್ರತಿಭೆಗಳು ಹೊರದೇಶಕ್ಕೆ ಹೋಗುತ್ತಿದ್ದವು. ಇಂದು ನಾವೇ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುತ್ತಿರುವುದರಿಂದ ಇಲ್ಲೇ ಕಲಿತು, ಇಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.
‘ಭಾರತದ ವೈದ್ಯಕೀಯ ಸ್ಥಿತಿ–ಗತಿಯನ್ನು ಬೇರೆ ಯಾವುದೇ ದೇಶಕ್ಕೆ ತುಲನೆ ಮಾಡುವುದು ಬೇಡ. 140 ಕೋಟಿ ಜನರನ್ನು ನಿಭಾಯಿಸುವ ದೊಡ್ಡ ದೇಶ ನಮ್ಮದು. ಭಾರತವೂ ಸೇರಿ ಜಗತ್ತಿನ ಎಲ್ಲ ದೇಶಗಳಿಗೂ ಗುಣಮಟ್ಟದ ವೈದ್ಯರ ಅಗತ್ಯವಿದೆ. ಆದರೆ, ಭಾರತದಲ್ಲಿ 60 ಕೋಟಿಗೂ ಹೆಚ್ಚು ಯುವಜನರು ಇದ್ದಾರೆ. ಅವರು ದೇಶಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬಲ್ಲರು’ ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ‘ದೇಶದಲ್ಲಿ 1.75 ಲಕ್ಷ ಆಯುಷ್ಮಾನ್ ಆರೋಗ್ಯ ಕೆಂದ್ರಗಳನ್ನು ಸ್ಥಾಪಿಸಲಾಗಿದೆ. ವೈದ್ಯಕೀಯ ಮಹಾವಿದ್ಯಾಲಯಗಳ ಸಂಖ್ದೆ 319 ರಿಂದ 706ಕ್ಕೆ ಏರಿಕೆಯಾಗಿದೆ. ಎಂಬಿಬಿಎಸ್ ಹಾಗೂ ಸ್ನಾತ್ತಕೋತ್ತರ ಸೀಟುಗಳಲ್ಲಿ ಶೇ 130ರಷ್ಟು ಹೆಚ್ಚಳವಾಗಿದೆ’ ಎಂದರು.
ಮುಂಬೈನ ಟಾಟಾ ಮೆಮೋರಿಯಲ್ ಕೇಂದ್ರದ ಉಪನಿರ್ದೇಶಕ ಡಾ.ಶೈಲೇಶ ವಿ. ಶ್ರೀಖಂಡೆ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಲಾಯಿತು. ಆರೋಗ್ಯ ವಿಜ್ಞಾನದ ವಿವಿಧ ವಿಭಾಗಗಳ 1,844 ವಿದ್ಯಾರ್ಥಿಗಳಿಗೆ ಪದವಿ, 35 ಮಂದಿಗೆ ಚಿನ್ನದ ಪದಕ ನೀಡಲಾಯಿತು.
ಕಾಹೆರ್ ಕುಲಾಧಿಪತಿ ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಪದವಿಗಳನ್ನು ಪ್ರದಾನ ಮಾಡಿದರು. ಕುಲಪತಿ ಡಾ.ನಿತಿನ್ ಗಂಗಾಣೆ, ಕುಲಸಚಿವ ಡಾ.ಎಂ.ಎಸ್. ಗಣಾಚಾರಿ ಹಾಗೂ ಕಂಟ್ರೋಲರ್ ಆಫ್ ಎಕ್ಸಾಮಿನೇಷನ್ ಡಾ.ಚಂದ್ರಾ ಮೆಟಗುಡ್ಡ ಉಪಸ್ಥಿತರಿದ್ದರು.
ಚಿನ್ನ ಬಾಚಿಕೊಂಡ ಮೇಜರ್ ಪ್ರೀತಿಕಾ
ಭಾರತೀಯ ಸೇನೆಯಲ್ಲಿ ಏಳು ವರ್ಷ ವೈದ್ಯಕೀಯ ಅಧಿಕಾರಿ ಆಗಿ ಸೇವೆ ಸಲ್ಲಿಸಿದ ಪಂಜಾಬ್ನ ಪಠಾಣಕೋಟ್ ಮೂಲದ ಮೇಜರ್ ಡಾ. ಪ್ರಿತಿಕಾ ಪಾಂಚಾಲಿ ಅವರು ‘ರೇಡಿಯೊ ಡೈಗ್ನಾಸಿಸ್ (ಎಂ.ಡಿ)’ನಲ್ಲಿ ಚಿನ್ನದ ಪದಕ ಪಡೆದರು. ‘ನನ್ನ ಪತಿ ಕೂಡ ಸೇನೆಯಲ್ಲಿ ವೈದ್ಯಾಧಿಕಾರಿ ಆಗಿದ್ದಾರೆ. ಹೆಚ್ಚಿನ ಕಲಿಕೆಗಾಗಿ ನಾನು ಇಲ್ಲಿ ಬಂದಿರುವೆ. ಸೇನೆಯಲ್ಲಿ ಮತ್ತು ಸಮಾಜದಲ್ಲಿ ವೈದ್ಯರಾಗುವುದಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಎರಡೂ ಕಡೆಯ ಸವಾಲುಗಳು ಬೇರೆಬೇರೆ’ ಎಂದು ಪ್ರಿತಿಕಾ ತಿಳಿಸಿದರು. ರೈತನ ಮಗಳಿಗೆ ನಾಲ್ಕು ಚಿನ್ನದ ಪದಕ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟದ ಕೆಎಲ್ಇ ಬಿ.ಎಂ.ಕಂಕಣವಾಡಿ ಆರ್ಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿನಿ ಡಾ.ಶ್ವೇತಾ ಗೋರೆ ಅವರು 4 ಚಿನ್ನದ ಪದಕ ಪಡೆದರು. ತಂದೆ ರಾಜಶೇಖರ–ತಾಯಿ ಶ್ರೀದೇವಿ ಕೃಷಿಕರು. ‘ಆರು ಎಕರೆ ಜಮೀನಿನಲ್ಲಿ ಅಪ್ಪ ಕೃಷಿ ಮಾಡುತ್ತಿದ್ದರು. ನಾನು ವೈದ್ಯೆಯಾಗುತ್ತೇನೆ ಎಂದಾಗ ಹೆದರಿದ್ದರು. ಪ್ರಭಾಕರ ಕೋರೆ ಅವರು ನೀಡಿದ ನೆರವು ಮತ್ತು ಪ್ರೋತ್ಸಾಹದಿಂದ ನನ್ನ ಕನಸು ಈಡೇರಿದೆ. ಬಡವರ ಮಕ್ಕಳೂ ವೈದ್ಯಕೀಯ ಶಿಕ್ಷಣ ಪಡೆಯಬಹುದು ಎಂಬುದಕ್ಕೆ ನಾನೇ ಸಾಕ್ಷಿ’ ಎಂದು ಡಾ. ಶ್ವೇತಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.