ಬೆಳಗಾವಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ–4ರ ಸರ್ವಿಸ್ ರಸ್ತೆಯಿಂದ ಗಾಂಧಿ ನಗರಕ್ಕೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರ ಕುತ್ತಿಗೆ ಸುತ್ತಿಕೊಂಡು ಕೊಯ್ದ ಪರಿಣಾಮ ಅವರು ಗಾಯಗೊಂಡಿದ್ದಾರೆ.
ಮಹಾದ್ವಾರ ರಸ್ತೆಯ ರಾಹುಲ ಜ್ಯೋತಿಬಾ ರಾಜಗೋಳಕರ ಗಾಯಗೊಂಡವರು.
ಅವರು ಕೆಲಸ ಮುಗಿಸಿ ಹೋಗುವಾಗ ಒಮ್ಮಿಂದೊಮ್ಮೆಲೆ ದಾರ ಕುತ್ತಿಗೆಗೆ ಸುತ್ತಿಕೊಂಡಿದೆ. ಅವರು ದ್ವಿಚಕ್ರವಾಹನ ನಿಲ್ಲಿಸುವಷ್ಟರಲ್ಲಿ ಕೊಯ್ದಿದೆ. ಈ ಬಗ್ಗೆ ಅವರು ನೀಡಿದ ದೂರನ್ನಾಧರಿಸಿ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಮಾಂಜಾ ದಾರ ತಯಾರಿಸುವವರು, ಮಾರುವವರು ಮತ್ತು ಅದನ್ನು ಖರೀದಿಸಿ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ದಾರ ಬಳಸಿ ಗಾಳಿಪಟ ಹಾರಿಸದಂತೆ ಪೋಷಕರು ಮಕ್ಕಳಿಗೆ ತಿಳಿ ಹೇಳಬೇಕು. ತಯಾರಿಸುವವರು ಮತ್ತು ಮಾರುವವರು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.