ADVERTISEMENT

ಸಹಕಾರದ ಸೇವೆಯಿಂದ ಆತ್ಮತೃಪ್ತಿ: ನ್ಯಾ ಸುಮಲತಾ ಬೆಣ್ಣಿಕಲ್ಲ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 16:11 IST
Last Updated 10 ಆಗಸ್ಟ್ 2024, 16:11 IST
ಸವದತ್ತಿಯಲ್ಲಿ ಪದೋನ್ನತ್ತಿ ಹೊಂದಿ ವರ್ಗಾವಣೆ ಹೊಂದಿದ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ್ಲ ಅವರನ್ನು ಗೌರವಿಸಲಾಯಿತು
ಸವದತ್ತಿಯಲ್ಲಿ ಪದೋನ್ನತ್ತಿ ಹೊಂದಿ ವರ್ಗಾವಣೆ ಹೊಂದಿದ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ್ಲ ಅವರನ್ನು ಗೌರವಿಸಲಾಯಿತು   

ಸವದತ್ತಿ: ಇಲ್ಲಿನ ನ್ಯಾಯಾಲಯದಲ್ಲಿನ ನ್ಯಾಯಾಧೀಶರು ಹಾಗೂ ವಕೀಲರ ಸಹಕಾರದಿಂದ ಸಲ್ಲಿಸಿದ ಸೇವೆ ಆತ್ಮತೃಪ್ತಿ ತಂದಿದೆ ಎಂದು ಪ್ರಧಾನ ದಿವಾಣಿ ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ್ಲ ಹೇಳಿದರು.

ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿರುವ ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ಪದೋನ್ನತ್ತಿ ಹೊಂದಿ ವರ್ಗಾವಣೆ ಹೊಂದಿದ ಪ್ರಯುಕ್ತ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಾಗರಿಕ ಸೇವೆಯಲ್ಲಿ ಪದೋನ್ನತ್ತಿ, ವರ್ಗಾವಣೆ ಅನಿವಾರ್ಯ. ಆದರೆ ಇಲ್ಲಿನವರೊಂದಿಗಿನ ಭಾಂದವ್ಯ ಅವಿಸ್ಮರಣೀಯ. ಸೇವೆಗೆ ನೇಮಕಗೊಂಡ ಆರಂಭದಲ್ಲಿ ಇಲ್ಲಿನ ಸೌಕರ್ಯಗಳ ಕೊರತೆಯ ಕುರಿತು ಆತಂಕವಿತ್ತು. ಆದರೆ, ಇಲ್ಲಿನ ಪರಿಸರವು ಸಮಸ್ಯೆಗಳನ್ನು ದೂರಾಗಿಸಿತು. ಕರ್ತವ್ಯದಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಜನರು ತೋರಿದ ಪ್ರೀತಿ ವಿಶ್ವಾಸ ಎಂದಿಗೂ ಮರೆಯಲಾಗದು. ನನ್ನ ವೃತ್ತಿ ಬದುಕಿಗೆ ಸವದತ್ತಿ ಮೈಲುಗಲ್ಲಾಗಿ ನೆನಪಲ್ಲಿರುತ್ತದೆ ಎಂದರು. 

ADVERTISEMENT

ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಮುತ್ತಿನ ಮಾತನಾಡಿ, ಜನತೆಗೆ ನ್ಯಾಯ ಒದಗಿಸಲು ತ್ವರಿತ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಇವರು ಸಾಮಾನ್ಯರ ಮೆಚ್ಚುಗೆಗೂ ಪಾತ್ರರಾದವರು. ವಕೀಲರೊಂದಿಗೆ ಉತ್ತಮ ಭಾಂದವ್ಯ ಹೊಂದಿ ಜನತೆಗೆ ನ್ಯಾಯ ಒದಗಿಸುವ ಕಾರ್ಯ ನಡೆಸಿ ಕಿರಿಯರಿಂದ ಹಿರಿಯ ಪ್ರಧಾನ ದಿವಾಣಿ ನ್ಯಾಯಾಧೀಶರಾಗಿ ಪದೋನ್ನತ್ತಿ ಹೊಂದಿದ ಬೆಣ್ಣಿಕಲ್ಲ ಅವರು ಭವಿಷ್ಯದಲ್ಲಿ ಇನ್ನೂ ಉನ್ನತ ಹುದ್ದೆ ಹೊಂದಲಿ. ಸವದತ್ತಿ ರೀತಿಯಲ್ಲಿಯೇ ನಿಪ್ಪಾಣಿಯಲ್ಲೂ ಜನರ ಸಮಸ್ಯೆಗೂ ಪರಿಹಾರ ಒದಗಿಸುವ ಕಾರ್ಯ ನಡೆಸಲೆಂದು ಹಾರೈಸಿದರು.

ವೇದಿಕೆ ಮೇಲೆ ವಕೀಲರ ಸಂಘ, ನ್ಯಾಯಾಧೀಶರು ಹಾಗು ನ್ಯಾಯಾಲಯದ ಸಿಬ್ಬಂದಿಗಳು ನ್ಯಾಯಾಧೀಶೆ ಸುಮಲತಾ ಬೆಣ್ಣಿಕಲ್ಲ ಅವರನ್ನು ಸನ್ಮಾನಿಸಿ, ಗೌರವಿಸಿದರು.  ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಶಶಿಧರ ಎಂ. ಗೌಡ, 1 ನೇ ಹೆಚ್ಚುವರಿ ನ್ಯಾಯಾಧೀಶ ಸಿದ್ರಾಮ ರಡ್ಡಿ, ಎಂ.ಎಫ್. ಬಾಡಿಗೇರ ಹಾಗೂ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.