ಬೆಳಗಾವಿ: ಚೆನ್ನೈ ಮೂಲದ ಸೊಸೈಟಿ ಆಫ್ ಆಟೊಮೋಟಿವ್ ಎಂಜಿನಿಯರ್ಸ್ ಇಂಡಿಯಾ ನಡೆಸಿದ ರಾಷ್ಟ್ರಮಟ್ಟದ ‘ಏರೋಥಾನ್– 2021’ ಏರೋಡಿಸೈನ್ ಸ್ಪರ್ಧೆಯಲ್ಲಿ ನಗರದ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನ ‘ವಾಯುಪುತ್ರ’ ತಂಡವು ಪ್ರಶಸ್ತಿ ಗಳಿಸಿದೆ.
ದೇಶದಾದ್ಯಂತ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಿಜ ಜೀವನದ ಏರೋಸ್ಪೇಸ್ ಎಂಜಿನಿಯರಿಂಗ್ ಸಮಸ್ಯೆಗಳ ಬಗ್ಗೆ ಕೆಲಸ ಮಾಡುವ ಅವಕಾಶವನ್ನು ನೀಡುವುದು ಸ್ಪರ್ಧೆಯ ಮೂಲ ಉದ್ದೇಶವಾಗಿತ್ತು.
ವೈದ್ಯಕೀಯ ಮತ್ತು ಕಣ್ಗಾವಲು ಕಾರ್ಯಗಳಿಗಾಗಿ ಯುಎವಿ (ಅನ್ನೇಮ್ಡ್ ಏರಿಯಲ್ ವೆಹಿಕಲ್) ವಿನ್ಯಾಸಗೊಳಿಸುವ ಕಾರ್ಯವನ್ನು ‘ವಾಯುಪುತ್ರ’ರಿಗೆ ವಹಿಸಲಾಗಿತ್ತು. ತಂಡವು ವಿ-7 ಹೆಸರಿನ (ನವೀನ ಬ್ಲೆಂಡೆಡ್ ವಿಂಗ್) ಯುಎವಿ ವಿನ್ಯಾಸಗೊಳಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದೆ. ಸ್ಪಧೆಯಲ್ಲಿ ಭಾರತದಾದ್ಯಂತ ಐಐಟಿ, ಎನ್ಐಟಿ ಮತ್ತು ಇತರ ಉನ್ನತ ಭಾರತೀಯ ಸಂಸ್ಥೆಗಗಳಿಂದ 76 ತಂಡಗಳು ಭಾಗವಹಿಸಿದ್ದವು. ‘ವಾಯುಪುತ್ರ’ 11ನೇ ಸ್ಥಾನ ಪಡೆದು ಯಶಸ್ವಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಏರೋನಾಟಿಕಲ್ ವಿಭಾಗದ ವಿದ್ಯಾರ್ಥಿಗಳಾದ ಶೇನ್ ಫರ್ನಾಂಡಿಸ್ (ತಂಡದ ನಾಯಕ), ತೇಜಸ್ ಬಾಣೆ, ಜಿತೇಂದ್ರಕುಮಾರ್ ಗಾರಗೆ, ನೂಪುರ್ ಬಾಗಿ, ತೇಜಸ್ ತಕ್ಕೇಕರ್, ಜೀತ್ ಠಕ್ಕರ್ ಮತ್ತು ರೋಹಿತ್ ರಾಘವನ್ ತಂಡದಲ್ಲಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಪರಮೇಶ್ವರ್ ಬಾನಕರ ಮಾರ್ಗದರ್ಶನ ನೀಡಿದ್ದಾರೆ. ತಂಡವನ್ನು ಪ್ರಾಂಶುಪಾಲ ಡಾ.ಜಯಂತ ಕೆ. ಕಿತ್ತೂರ ಮತ್ತು ವಿಭಾಗದ ಪ್ರಾಧ್ಯಾಪಕ ಡಾ.ಟಿ.ಆರ್. ಅನಿಲ ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.