ಬೆಳಗಾವಿ: ಕೊರೊನಾ ವೈರಾಣು ಭೀತಿ ಹಾಗೂ ಲಾಕ್ಡೌನ್ನಿಂದಾಗಿ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಚಿನ್ನ, ಬೆಳ್ಳಿ ಆಭರಣ, ವಾಹನಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಖರೀದಿ ಭರಾಟೆ ಶುಕ್ರವಾರ ಕಂಡುಬರಲಿಲ್ಲ. ‘ಅಕ್ಷಯ ತೃತೀಯಾ’ ದಿನದಂದು ಬೆಳಿಗ್ಗೆಯಿಂದ ರಾತ್ರಿವರೆಗೂ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ಈ ಮಳಿಗೆಗಳು ಬಂದ್ ಆಗಿದ್ದವು.
‘ಈ ಶುಭ ದಿನದಂದು ಬಂಗಾರ ಖರೀದಿಸಿದರೆ ವರ್ಷವಿಡೀ ಒಳಿತಾಗುತ್ತದೆ; ಸಂಪತ್ತು ಅಕ್ಷಯವಾಗುತ್ತದೆ’ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ, ಚಿನ್ನಾಭರಣಗಳಿಗೆ ಬೇಡಿಕೆ ಬರುತ್ತಿತ್ತು. ಜನರು ತಮ್ಮ ಶಕ್ತಿ ಅನುಸಾರ ಖರೀದಿಗೆ ಗ್ರಾಹಕರು ಮುಗಿಬೀಳುತ್ತಿದ್ದರು. ಲಾಕ್ಡೌನ್ ಕಾರಣದಿಂದ ಅಕ್ಷಯ ತೃತೀಯ ಸಡಗರ ಇರಲಿಲ್ಲ.
ಖಡೇಬಜಾರ್, ಸಮಾದೇವಿ ಗಲ್ಲಿ, ತಿಲಕವಾಡಿ, ಶಹಾಪುರದಲ್ಲಿರುವ ಚಿನ್ನಾಭರಣ ಅಂಗಡಿಗಳು ಸೇರಿದಂತೆ ತನಿಷ್ಕ್, ಮಲಬಾರ್, ಜೋಯಾಲುಕ್ಕಾಸ್, ಪಿ.ಎನ್. ಗಾಡ್ಗೀಳ್, ಕಲ್ಯಾಣ್, ಲಕ್ಷ್ಮಿ ಗೋಲ್ಡ್ ಪ್ಯಾಲೇಸ್ ಮೊದಲಾದ ದೊಡ್ಡ ಮಳಿಗೆಗಳು ಮುಚ್ಚಿದ್ದವು. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸೇರಿ ಕೆಲವು ಕಂಪನಿಗಳು ಆನ್ಲೈನ್ನಲ್ಲಿ ಚಿನ್ನಾಭರಣ ಖರೀದಿಗೆ ಅವಕಾಶ ಒದಗಿಸಿದ್ದವು.
ನಗರವೊಂದರಲ್ಲೇ 250ಕ್ಕೂ ಹೆಚ್ಚಿನ ಚಿನ್ನಾಭರಣ ಅಂಗಡಿಗಳಿವೆ. ಜಿಲ್ಲೆಯವರ ಜೊತೆ ಸಮೀಪದ ಮಹಾರಾಷ್ಟ್ರದಿಂದಲೂ ಗ್ರಾಹಕರು ಬರುತ್ತಿದ್ದರು. ವಾಹನಗಳ ಷೋ ರೂಂಳು, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳು ಕೂಡ ಮುಚ್ಚಿದ್ದವು. ಸತತ 2ನೇ ವರ್ಷ ವಹಿವಾಟು ಮಂಕಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.