ಬೆಳಗಾವಿ: ‘ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚಿನ ಅವಕಾಶಗಳಿಗಾಗಿ ತಾಂತ್ರಿಕ ಕೌಶಲ ಹೆಚ್ಚಿಸಿಕೊಳ್ಳಬೇಕು’ ಎಂದು ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಸಲಹೆ ನೀಡಿದರು.
ಇಲ್ಲಿನ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾಲೇಜಿನಲ್ಲಿ ಶನಿವಾರ ನಡೆದ 7ನೇ ವಾರ್ಷಿಕೋತ್ಸವ ಹಾಗೂ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
‘ಸತ್ಯ, ಸೇವೆ, ಪಾರದರ್ಶಕತೆ ಹಾಗೂ ದೂರದರ್ಶಿತ್ವ ಧ್ಯೇಯಗಳೊಂದಿಗೆ ಮನ್ನಡೆದಲ್ಲಿ ಇಂದಿನ ಸ್ಪರ್ಧಾತ್ಮಕ ಹಾಗೂ ತಾಂತ್ರಿಕ ಜಗತ್ತಿನಲ್ಲಿ ತಾಂತ್ರಿಕ ಪದವೀಧರರಿಗೆ ಉದ್ಯೋಗಳನ್ನು ಗಳಿಸಲು ಹೆಚ್ಚಿನ ಅವಕಾಶಗಳಿವೆ. ಪದವಿ ಪಡೆಯುವ ಪ್ರತಿಯೊಬ್ಬರೂ ದೌರ್ಬಲ್ಯ, ಕೀಳರಿಮೆ ತೊರೆದು ಸ್ವಸಾಮರ್ಥ್ಯದಿಂದ ಮುಂದೆ ಬರಬೇಕು’ ಎಂದು ತಿಳಿಸಿದರು.
‘ದೇಶವು ಜಗತ್ತನ್ನು ಬದಲಾಯಿಸುವಂತಹ ಸಾಮರ್ಥ್ಯ ಮತ್ತು ಕುಶಾಗ್ರತೆಯುಳ್ಳ ಎಂಜಿನಿಯರಿಂಗ್ ಹಾಗೂ ವ್ಯವಸ್ಥಾಪನಾ ವಿದ್ಯಾರ್ಥಿಗಳನ್ನು ಹೊಂದಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ, ಸಂಸದ ಸುರೇಶ ಅಂಗಡಿ ಮಾತನಾಡಿ, ‘ಭಾರತವು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುತ್ತಿದೆ. ಹೀಗಾಗಿ, ಉದ್ಯೋಗದ ಅವಕಾಶಗಳಿಗೆ ಕೊರತೆ ಇಲ್ಲ. ತಾಂತ್ರಿಕ ವಿದ್ಯಾರ್ಥಿಗಳು ವಿದ್ಯೆಯ ಜೊತೆ ವಿನಯ, ಗುರುಗಳ ಬಗ್ಗೆ ಗೌರವ ಭಾವನೆ ಹೊಂದಬೇಕು. ಉತ್ತಮ ನಾಗರಿಕರಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ಹೇಳಿದರು.
ಪ್ರಾಚಾರ್ಯ ಸಂಜಯ ಪೂಜಾರಿ ವಾರ್ಷಿಕ ವರದಿ ಓದಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ 400 ಎಂಜಿನಿಯರಿಂಗ್, ಎಂಬಿಎ ಹಾಗೂ ಎಂ.ಟೆಕ್. ವಿದ್ಯಾರ್ಥಿಗಳಿಗೆ ವ್ಯಾಸಂಗ ಪ್ರಮಾಣಪತ್ರ ನೀಡಲಾಯಿತು. ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪದವಿಗಳಿಸಿದ ರಕ್ಷಿತಾ, ಸತೀಶ್ ಭಗತ್, ಅಮೃತೇಶಕುಮಾರ ಸಿಂಗ್, ಆಶ್ರಿತಾ, ಅರ್ಪಣಾ, ಪೂಜಾ ಅನಿಸಿಕೆ ಹಂಚಿಕೊಂಡರು.
ಬೋಧಕರಾದ ರಾಜೇಂದ್ರ ಇನಾಮದಾರ, ಅಶೋಕ ಹುಲಗಬಾಳಿ, ಪ್ರೊ.ಅನಿಲಕುಮಾರ ಕೋರಿಶೆಟ್ಟಿ, ಪ್ರೊ.ಅಮರ ಬ್ಯಾಕೋಡಿ, ಪ್ರೊ.ಸಾಗರ ಬಿರ್ಜೆ, ಪ್ರೊ.ಕಿರಣ ಪೋತದಾರ, ಪ್ರೊ.ವಸಂತಕುಮಾರ ಉಪಾಧ್ಯೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಪೂಜಾ ನಾಯಿಕ ಹಾಗೂ ಚಂದ್ರಕಾಂತ ಪಾಟೀಲ ಇದ್ದರು.
ಪ್ರೊ.ವಿಜಯ ಕುಂಬಾರ ಪರಿಚಯಿಸಿದರು. ಪ್ರೊ.ಪ್ರಿಯಾಂಕಾ ಪೂಜಾರಿ ಹಾಗೂ ಪ್ರೊ.ವರ್ಷಾ ದೇಶಪಾಂಡೆ ನಿರೂಪಿಸಿದರು. ಪ್ರೊ.ಸಚಿನ ಕುಲಕರ್ಣಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.