ಚಿಕ್ಕೋಡಿ: ಬೆಳಗಾವಿ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿರುವ ಬೆಳಗಾವಿ-ಪುಣೆ ಇಂಟರ್ ಸಿಟಿ ರೈಲು ಪ್ರಾರಂಭಿಸುವಂತೆ ಕೇಂದ್ರ ರೈಲ್ವೆ ಬೋರ್ಡ್ನ ಚೇರಮನ್ ಜಯಾ ವರ್ಮಾ ಸಿನ್ಹಾ ಅವರಿಗೆ ದೆಹಲಿಯಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.
ಬೆಳಗಾವಿಯು ಕರ್ನಾಟಕ, ಮಹಾರಾಷ್ಟ್ರ,ಗೋವಾ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ನಗರವಾಗಿದೆ. ಬೆಳಗಾವಿಯಲ್ಲಿ ಅಂದಾಜು 6 ಲಕ್ಷ ಜನ ವಾಸಿಸುತ್ತಿದ್ದು, ಸಕ್ಕರೆ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಸದ್ಯ ಸಾಮಾನ್ಯ ರೈಲುಗಳಿಲ್ಲದೆ ಹೆಚ್ಚಿನ ಸಾರ್ವಜನಿಕರು ಖಾಸಗಿ ಬಸ್ಗಳಲ್ಲಿ ಸಂಚರಿಸುತ್ತಾರೆ. ಹಾಗಾಗಿ ಬೆಳಗಾವಿ-ಪುಣೆ ನಡುವೆ ಹೊಸ ಇಂಟರ್ ಸಿಟಿ ರೈಲು ಪ್ರಾರಂಭಿಸುವಂತೆ ಜನರು ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಮನವಿಗೆ ಸ್ಪಂದಿಸಿರುವ ಜಯಾ ವರ್ಮಾ ಸಿನ್ಹಾ ಅವರು, ಮುಂಬರುವ ಬಜೆಟ್ನಲ್ಲಿ ಬೆಳಗಾವಿ-ಪುಣೆ ರೈಲು ಮಾರ್ಗ ಪ್ರಾರಂಭಿಸಲು ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಬೆಂಗಳೂರು-ಧಾರವಾಡ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭಕ್ಕೆ ಸಿನ್ಹಾ ಅವರನ್ನು ಅಹ್ವಾನಿಸಿರುವುದಾಗಿ ಪ್ರಕಾಶ ಹುಕ್ಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.