ADVERTISEMENT

‘ಆಶಾ’ ಕಾರ್ಯಕರ್ತೆ ಸಾವು: ಕೋವಿಡ್ ಲಸಿಕೆ ಕಾರಣವಲ್ಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 7:14 IST
Last Updated 6 ಫೆಬ್ರುವರಿ 2021, 7:14 IST
   

ಬೆಳಗಾವಿ: ಕೋವಿಡ್ ಲಸಿಕೆ ಪಡೆದಿದ್ದ ಚಿಕ್ಕೋಡಿ ತಾಲ್ಲೂಕಿನ 33 ವರ್ಷದ ಆಶಾ ಕಾರ್ಯಕರ್ತೆ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ. ‘ಅವರ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎನ್ನುವುದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿದೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಸ್ಪಷ್ಟಪಡಿಸಿದ್ದಾರೆ.

‘ಅವರು ಜ.22ರಂದು ಕೋವಿಶೀಲ್ಡ್ ಲಸಿಕೆ ಪಡೆದಿದ್ದರು. ಹಲವು ದಿನಗಳ ನಂತರ ಅಂದರೆ ಅವರಿಗೆ ಜ. 30ರಂದು ಪದೇ ಪದೇ ವಾಂತಿಯಾಗಿದೆ. ಬಹಳ ತಲೆನೋವು ಕೂಡ ಬಂದಿತ್ತು. ಚಿಕಿತ್ಸೆಗಾಗಿ ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಅವರಿಗೆ ಪಾರ್ಶ್ವವಾಯು ಕೂಡ ಆಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಫೆ. 3ರಂದು ಮೃತರಾಗಿದ್ದಾರೆ. ಮಿದುಳಿನಲ್ಲಿ ರಕ್ತಸಂಚಾರ ಸಮರ್ಪಕವಾಗಿಲ್ಲದ ಕಾರಣ ಅವರು ಮೃತರಾಗಿದ್ದಾರೆ ಎನ್ನುವುದು ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ’ ಎಂದು ಮಾಹಿತಿ ನೀಡಿದರು.

‘ಅವರಿಗೆ ಪದೇ ಪದೆ ತಲೆನೋವು ಕಾಣಿಸಿಕೊಳ್ಳುತ್ತಿತ್ತು. ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ಕುಟುಂಬದವರು ಕೂಡ ತಿಳಿಸಿದ್ದಾರೆ. ಅವರ ಸಾವು ಕೋವಿಡ್ ಲಸಿಕೆಯಿಂದ ಆಗಿಲ್ಲ ಎಂದು ಇಲಾಖೆಯ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.