ಬೆಳಗಾವಿ: ಪ್ರೋತ್ಸಾಹ ಧನ ಹಾಗೂ ಗೌರವ ಧನ ಎರಡನ್ನೂ ಸೇರಿಸಿ ಪ್ರತಿ ತಿಂಗಳು ₹ 12 ಸಾವಿರ ಗೌರವ ಧನ ನೀಡಬೇಕು ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಜೀವ ರಕ್ಷಕ ವಸ್ತುಗಳನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಒತ್ತಾಯಿಸಿದೆ.
ನಗರದಲ್ಲಿ ಗುರುವಾರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
‘ಪ್ರಸ್ತುತ ಕಾರ್ಯಕರ್ತೆಯರಿಗೆ ಮಾಸಿಕ ಗೌರವ ಧನ ₹ 4 ಸಾವಿರ ಹಾಗೂ ಇತರೆ ಕೆಲಸ ಕಾರ್ಯಗಳನ್ನು ಸೇರಿಸಿ ₹ 8 ಸಾವಿರದಿಂದ 9 ಸಾವಿರದವರೆಗೆ ಸಿಗುತ್ತಿದೆ. ಹೀಗೆ, ಬಿಡಿಬಿಡಿಯಾಗಿ ನೀಡುವ ಬದಲು ಒಟ್ಟಾಗಿ ₹ 12 ಸಾವಿರ ನೀಡಬೇಕು. ಇದರ ಬಗ್ಗೆ ಹಲವು ಬಾರಿ ಹೋರಾಟ ಮಾಡಿದ್ದೇವೆ. ಸರ್ಕಾರ ಕೇವಲ ಭರವಸೆ ನೀಡುತ್ತ ಬಂದಿದೆ, ಹೊರತು ಈಡೇರಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೊರೊನಾ ವಿರುದ್ಧ ಮುಂದೆ ನಿಂತು ಆಶಾ ಕಾರ್ಯಕರ್ತೆಯರು ಹೋರಾಟ ಮಾಡುತ್ತಿದ್ದಾರೆ. ಇವರಿಗೆ ಸುರಕ್ಷಾ ಕಿಟ್ಗಳನ್ನು ನೀಡಬೇಕು. ಮಾಸ್ಕ್ ಸ್ಯಾನಿಟೈಸರ್, ಕೈಗವುಸು ನೀಡಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜುಲೈ 10ರಿಂದ ಸೇವೆ ಸ್ಥಗಿತಗೊಳಿಸಿ, ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.