ಅಥಣಿ: ‘ಬೇಡಿಕೆ ಇಲ್ಲದಿರುವುದು ಹಾಗೂ ಬೆಲೆ ಕುಸಿತದಿಂದ ನೊಂದ ತಾಲ್ಲೂಕಿನ ಝುಂಜರವಾಡ ಗ್ರಾಮದ ರೈತ ಸ್ವಪ್ನಿಲ್ ಪಾಟೀಲ ಅವರು ಮೂರು ಎಕರೆ ಕ್ಯಾಪ್ಸಿಕಂ (ದೊಡ್ಡಮೆಣಸಿನಕಾಯಿ) ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತವರಿನಲ್ಲಿ ಈ ಘಟನೆ ನಡೆದಿದೆ.
‘ಲಾಕ್ಡೌನ್ ಸಡಿಲಿಕೆಯಾದರೂ ಕ್ಯಾಪ್ಸಿಕಂಗೆ ಬೇಡಿಕೆ ಇಲ್ಲ. ಹೀಗಾಗಿ, ಮುಂದಿನ ಬೆಳೆಗೆ ಭೂಮಿ ಹದಗೊಳಿಸಲು ನಾಶಪಡಿಸಿದ್ದೇನೆ. ಬೆಳೆ ಕೈಗೆ ಬಂದರೂ ಬಾಯಿಗೆ ಬರಲಿಲ್ಲ. ಇದರಿಂದ ಬಹಳ ಬೇಸರವಾಗಿದೆ. 3 ಎಕರೆಯಲ್ಲಿ ಕ್ಯಾಪ್ಸಿಕಂ ಬೆಳೆಯಲು ₹ 5 ಲಕ್ಷ ಖರ್ಚಾಗಿದೆ. ಸರ್ಕಾರ ಎಕರೆಗೆ ₹15 ಸಾವಿರ ಮಾತ್ರ ಘೋಷಿಸಿದೆ. ಅದು ಯಾವುದಕ್ಕೂ ಸಾಲದು’ ಎಂದು ಸ್ವಪ್ನಿಲ್ ತಿಳಿಸಿದರು.
‘ತರಕಾರಿ ಬೆಳೆದ ರೈತರಿಗೆ ಸರ್ಕಾರ ಪರಿಹಾರ ಘೋಷಿಸಿದೆ. ಆದರೆ ಈವರೆಗೂ ಸಂಬಂಧಪಟ್ಟ ಇಲಾಖೆಯವರು ಸ್ಪಂದಿಸಿಲ್ಲ ಹಾಗೂ ಯಾರಿಗೂ ಒಂದು ರೂಪಾಯಿ ಕೂಡ ಪರಿಹಾರವಾಗಿ ಬಂದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.