ADVERTISEMENT

ಕೃಷಿ ವಿದ್ಯಾಲಯ ಸ್ಥಾಪನೆಗೆ ಪ್ರಯತ್ನ: ಸವದಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 13:46 IST
Last Updated 5 ಸೆಪ್ಟೆಂಬರ್ 2024, 13:46 IST
ಅಥಣಿ ಕೃಷಿ ಇಲಾಖೆಯ ನೂತನ ಗೋಧಾಮು ನಿರ್ಮಾಣ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆ ನೆರವೇರಿಸಿದರು
ಅಥಣಿ ಕೃಷಿ ಇಲಾಖೆಯ ನೂತನ ಗೋಧಾಮು ನಿರ್ಮಾಣ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆ ನೆರವೇರಿಸಿದರು   

ಅಥಣಿ: ‘ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಅಥಣಿ ಮತಕ್ಷೇತ್ರದಲ್ಲಿ ಕೃಷಿ ವಿದ್ಯಾಲಯ ಸ್ಥಾಪನೆ ಮಾಡುವ ಸಂಕಲ್ಪ ಹೊಂದಿದ್ದೇನೆ, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ  ಸಲ್ಲಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಮಂಜೂರಾತಿ ಪಡೆದುಕೊಳ್ಳಲಾಗುವುದು’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ಪಟ್ಟಣದ ಹೊರವಲಯದ ಬೀಜೋತ್ಪನ್ನ ಕೇಂದ್ರದಲ್ಲಿ ಕೃಷಿ ಇಲಾಖೆಯ ನೂತನ ಗೋಧಾಮು ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

‘ಕೃಷಿ ಇಲಾಖೆಯ ಪರಿಕರಗಳನ್ನು ದಾಸ್ತಾನು ಮಾಡಲು ನೂತನ ಗೋಧಾಮು ನಿರ್ಮಾಣಕ್ಕೆ ಸರ್ಕಾರದಿಂದ ₹25 ಲಕ್ಷ ಅನುದಾನ ಮಂಜೂರಾಗಿದ್ದು, ಇದರ ಕಾಮಗಾರಿ ಅನುಷ್ಠಾನವನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿದೆ.  ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಲು ಸೂಚಿಸಲಾಗಿದೆ’ ಎಂದರು.

ADVERTISEMENT

‘ಅಥಣಿ ಪಟ್ಟಣ ಸೇರಿದಂತೆ ಮತಕ್ಷೇತ್ರದಲ್ಲಿ ಅಗತ್ಯವಿರುವ ಮೂರು ಸರ್ಕಾರಿ ಪ್ರೌಢಶಾಲೆಗಳ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ತಾಲೂಕಿನ ಕೊಕಟನೂರದಲ್ಲಿ ಸ್ಥಾಪನೆಯಾಗಿರುವ ಪಶು ವೇದಿಕೆಯ ಮಹಾವಿದ್ಯಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಉದ್ಘಾಟನೆ ಮಾಡಲಿದ್ದಾರೆ, ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ಅನುಮೋದನೆ ಪಡೆದು,  ಪ್ರಸಕ್ತ ವರ್ಷದಲ್ಲಿ ತರಗತಿಗಳನ್ನು ಆರಂಭಿಸಲು ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಹೇಳಿದರು.

 ಮುಖಂಡರಾದ ಶಿವರುದ್ರ ಗೂಳಪ್ಪನ್ನವರ , ಅರುಣ ಬಾಸಿಂಗೆ, ನರಸು ಬಡಕಂಬಿ, ಶ್ರೀಶೈಲ ನಾಯಿಕ, ಕೆಆರ್‌ಐಡಿಎಲ್‌ನ ಸಹಾಯಕ  ಎಂಜಿನಿಯರ್‌ ಸದಾಶಿವಯ್ಯ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ನಿಂಗನಗೌಡ ಬಿರಾದಾರ, ಸಹಾಯಕ ಎಂಜಿನಿಯರ್‌ ಸಂತೋಷ ಶೇಗುಣಸಿ, ಸಹಾಯಕ ಕೃಷಿ ಅಧಿಕಾರಿ ಗುಂಜಿಗಾವಿ ಹಾಗೂ ಸಿಬ್ಬಂದಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.