
ಮುಗಳಖೋಡ: ‘ಆಯುರ್ವೇದದ ಬಳಕೆಯಿಂದ ನಾವು ದೀರ್ಘಾಯುಷ್ಯ ಆಗಬಹುದು. ಆರೋಗ್ಯಕರ ಜೀವನ ಮತ್ತು ಸುಖವನ್ನು ನೀಡುವ ಅಮೂಲ್ಯ ಜೀವನಶಾಸ್ತ್ರ ಇದಾಗಿದೆ’ ಎಂದು ಮಾಜಿ ಶಾಸಕ ಬಿ.ಎಸ್.ಸರಿಕರ ಹೇಳಿದರು.
ಪಟ್ಟಣದ ನಿಸರ್ಗಧಾಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಪಾರಂಪರಿಕ ವೈದ್ಯರಾದ ಅಲ್ಲಯ್ಯ ಹಿರೇಮಠ ಅವರು ಭಾರತ ಹುಣ್ಣಿಮೆಯ ದಿನ ಆಸ್ತಮಾ, ಅಲರ್ಜಿ ರೋಗಿಗಳಿಗೆ ನೀಡುವ ಉಚಿತ ಔಷಧ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಾಟಿವೈದ್ಯ ಅಲ್ಲಯ್ಯ ಹಿರೇಮಠ ಮಾತನಾಡಿ, ‘ಆಯುರ್ವೇದವು ಪ್ರತಿಯೊಬ್ಬರ ದೇಹದ ಸ್ವಭಾವಕ್ಕೆ ಅನುಗುಣವಾಗಿ ಆಹಾರ, ಜೀವನಶೈಲಿ ಮತ್ತು ಚಿಕಿತ್ಸೆಯನ್ನು ಸೂಚಿಸುತ್ತದೆ. ಇದರಿಂದ ದೇಹದ ವಾತ, ಪಿತ್ತ ಮತ್ತು ಕಫ ದೋಷಗಳು ಸಮತೋಲನದಲ್ಲಿದ್ದು, ರೋಗಗಳು ಉಂಟಾಗುವುದನ್ನು ತಡೆಯಬಹುದು. ನೈಸರ್ಗಿಕ ಔಷಧಿಗಳು ಮತ್ತು ಸಸ್ಯಾಧಾರಿತ ಈ ನಾಟಿ, ಆಯುರ್ವೇದ ಚಿಕಿತ್ಸೆಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತವೆ’ ಎಂದರು.
ಇದೇ ವೇಳೆ ಲಕ್ಷ್ಮಿ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ದೇವಿಗೆ ರುದ್ರಾಭಿಷೇಕ, ಪುಷ್ಪಾಲಂಕರ ನೆರವೇರಿತು. 10 ಗಂಟೆಯಿಂದ ಹೋಮ, ಹವನ ಹಾಗೂ ಕುಂಕುಮಾರ್ಚನೆ ಮತ್ತು ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. 300ಕ್ಕೂ ಅಧಿಕ ಜನರು ಔಷಧಿ ಪಡೆದರು.
ಕೆಪಿಸಿಸಿ ಅಸಂಘಟಿತ ಕಾರ್ಮಿಕ ವರ್ಗದ ರಾಜ್ಯ ಉಪಾಧ್ಯಕ್ಷ ಡಾ.ಸಿ.ಬಿ. ಕುಲಿಗೋಡ, ಬಿ.ಎಂ. ಕಂಬಿ, ನಿವೃತ್ತ ಶಿಕ್ಷಕ ಎಸ್.ಎಸ್. ಮಠದ, ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಕಾರ್ಯದರ್ಶಿ ಶಿವಾನಂದ ಜಂಗಿನಮಠ, ಬಿ.ಆರ್.ಆಜೂರ, ಲತಾ ಹುದ್ದಾರ್ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.