ADVERTISEMENT

‘ಬುದ್ಧ, ಬಸವ, ಅಂಬೇಡ್ಕರ್‌ ಅಮರ ಜ್ಯೋತಿ’–ಆರ್.ಎಸ್.ದರ್ಗೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 9:35 IST
Last Updated 13 ಆಗಸ್ಟ್ 2021, 9:35 IST
ಬಸವ ಭೀಮ ಸೇನೆಯ ವತಿಯಿಂದ ಬೆಳಗಾವಿಯ ಬಸವೇಶ್ವರ ಉದ್ಯಾನದಲ್ಲಿ ಬಸವ ಪಂಚಮಿಯನ್ನು ಶುಕ್ರವಾರ ಆಚರಿಸಲಾಯಿತು
ಬಸವ ಭೀಮ ಸೇನೆಯ ವತಿಯಿಂದ ಬೆಳಗಾವಿಯ ಬಸವೇಶ್ವರ ಉದ್ಯಾನದಲ್ಲಿ ಬಸವ ಪಂಚಮಿಯನ್ನು ಶುಕ್ರವಾರ ಆಚರಿಸಲಾಯಿತು   

ಬೆಳಗಾವಿ: ‘ಭಾರತವು ಜಗತ್ತಿಗೆ ಬುದ್ಧ, ಬಸವ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಎಂಬ ಮೂರು ಬೆಳಕಿನ ಹಾಗೂ ಜ್ಞಾನದ ಅಮರ ಜ್ಯೋತಿಗಳನ್ನು ನೀಡಿದೆ. ಅವು ಎಂದಿಗೂ ನಂದುವುದಿಲ್ಲ. ನಮ್ಮ ಬದುಕಿಗೆ ಸದಾ ಬೆಳಕಾಗಿರುತ್ತವೆ’ ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಹೇಳಿದರು.

ಬಸವ ಭೀಮ ಸೇನೆ ವತಿಯಿಂದ ನಗರದ ಗೋವಾವೇಸ್‌ನಲ್ಲಿರುವ ಬಸವೇಶ್ವರ ಉದ್ಯಾನದಲ್ಲಿ ಶುಕ್ರವಾರ ನಡೆದ ‘ಬಸವಣ್ಣನವರ ಲಿಂಗೈಕ್ಯ ದಿನ– ಬಸವ ಪಂಚಮಿ’ ನಿಮಿತ್ತ ‘ಲಿಂಗಾಯತ ಧರ್ಮ ಗುರುವಿಗೆ ಧನ್ಯವಾದ ಮತ್ತು ಧರ್ಮ ಕಟ್ಟಿದ ಬಸವಾದಿ ಶರಣರಿಗೆ ಶರಣು ಶರಣಾರ್ಥಿ’ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಉದಯಿಸಿದ ಬೌದ್ಧ ಧರ್ಮ ಇಂದು ಜಗತ್ತಿನ 7 ದೇಶಗಳಲ್ಲಿ ಅಧಿಕೃತ ಧರ್ಮವಾಗಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಹುಟ್ಟದಿದ್ದರೆ, ಭಾರತಕ್ಕೆ ಭವ್ಯವಾದ ಇತಿಹಾಸವೇ ಇರುತ್ತಿರಲಿಲ್ಲ. 20ನೇ ಶತಮಾನದಲ್ಲಿ ಅಂಬೇಡ್ಕರ್‌ ಜನಿಸದಿದ್ದರೆ 21ನೇ ಶತಮಾನವು ಭಾರತದ ಪಾಲಿಗೆ ಶೂನ್ಯ ಶತಮಾನ ಆಗುತಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ಬಸವಣ್ಣನವರ ಹೆಸರು ಹೇಳಿಕೊಂಡು ಬದುಕುವ ಲಿಂಗಾಯತ ಮಠಾಧೀಶರು, ಪ್ರತ್ಯೇಕ ಧರ್ಮದ ಹೋರಾಟಕ್ಕೆ ಎದ್ದು ನಿಲ್ಲಬೇಕು. ಅನುಭವ ಮಂಟಪವನ್ನು ಶಕ್ತಿ ಕೇಂದ್ರವನ್ನಾಗಿಸಬೇಕು’ ಎಂದು ಕೋರಿದರು.

ಕಾರ್ಯಕ್ರಮ ಉದ್ಘಾಟಿಸಿದ ಗೋಕಾಕ ತಾಲ್ಲೂಕು ವಚನೋತ್ಸವ ಸಮಿತಿ ಅಧ್ಯಕ್ಷ ಜಿ.ಎಸ್. ಕರ್ಪೂರಮಠ, ‘ಬಸವಾಭಿಮಾನಿಗಳು ಕೇವಲ ವಚನಗಳನ್ನು ಓದಿದರೆ ಸಾಲದು. ಲಿಂಗಾಯತ ಧರ್ಮದ ಅರ್ಥಪೂರ್ಣ ಆಚರಣೆಗಳನ್ನು ಮುಂದುವರಿಸಬೇಕು. ಬಸವಾದಿ ಶರಣರ ಆಶಯಗಳು ನಮ್ಮ ನಿತ್ಯ ಜೀವನದ ಭಾಗವಾಗಬೇಕು’ ಎಂದು ಆಶಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ‘ಲಿಂಗಾಯತ ಧರ್ಮದ ಮಾನ್ಯತೆಗಾಗಿಯೇ ಹುಟ್ಟಿಕೊಂಡಿರುವ ಜಾಗತಿಕ ಲಿಂಗಾಯತ ಮಹಾಸಭೆಯನ್ನು ಬಹು ದೊಡ್ಡ ಮಟ್ಟದಲ್ಲಿ ಸಂಘಟಿಸಲಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ತಾಲ್ಲೂಕು ಹಾಗೂ ಗ್ರಾಮ ಘಟಕಗಳನ್ನು ಉದ್ಘಾಟಿಸಲಾಗುವುದು’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಲಿಂಗಾಯತ ಧರ್ಮ ಮಹಾಪೀಠದ ಬಸವಪ್ರಭು ಸ್ವಾಮೀಜಿ, ‘ಬಸವಣ್ಣನವರ ನಿಸರ್ಗಮಯ ಜೀವನವು ಇಂದು ವಿಶ್ವಕ್ಕೆ ಮೆಚ್ಚುಗೆಯಾಗಿದೆ. ಎಲ್ಲರನ್ನೂ ಅಪ್ಪಿಕೊಳ್ಳುವ ಬಸವಾದಿ ಶರಣರ ಹಾಗೂ ಲಿಂಗಾಯತ ಧರ್ಮೀಯರ ಬದುಕು ಪರಿಪೂರ್ಣವಾದುದು’ ಎಂದರು.

ಮುಖಂಡರಾದ ಸಿದ್ರಾಮ ಸಾವಳಗಿ, ಬಿ.ಡಿ. ಪಾಟೀಲ, ಬಿ.ಎಸ್. ಪಾಟೀಲ, ಯಲ್ಲಪ್ಪ ಹುದಲಿ, ಸಂತೋಷ ಹೊಂಗಲ, ಹೀರಾಲಾಲ ಚವಾಣ, ರಾಜಶ್ರೀದಯನ್ನವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.