ADVERTISEMENT

ವಿದ್ಯಾರ್ಥಿಯನ್ನು ಠಾಣೆಗೆ ಕರೆಸಿ ಹೊಡೆದ ಆರೋಪ: ಪ್ರತಿಭಟನೆ

ನಾಡಧ್ವಜ ಹಿಡಿದು ಕುಣಿದ ವಿದ್ಯಾರ್ಥಿ: ಠಾಣೆಗೆ ಕರೆಸಿ ಹೊಡೆದರು– ಆರೋಪ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 18:06 IST
Last Updated 1 ಡಿಸೆಂಬರ್ 2022, 18:06 IST
ಬೆಳಗಾವಿಯಲ್ಲಿ ಗುರುವಾರ ಗೋಗಟೆ ಕಾಲೇಜಿಗೆ ಮುತ್ತಿಗೆ ಹಾಕಲು ಬಂದ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆದ ಕಾರಣ, ಕೆಲವರು ಪೊಲೀಸ್‌ ವಾಹನದ ಮೇಲೆಯೇ ಹತ್ತಿ ಧ್ವಜ ಹಾರಿಸಿದರು / ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಗುರುವಾರ ಗೋಗಟೆ ಕಾಲೇಜಿಗೆ ಮುತ್ತಿಗೆ ಹಾಕಲು ಬಂದ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆದ ಕಾರಣ, ಕೆಲವರು ಪೊಲೀಸ್‌ ವಾಹನದ ಮೇಲೆಯೇ ಹತ್ತಿ ಧ್ವಜ ಹಾರಿಸಿದರು / ಪ್ರಜಾವಾಣಿ ಚಿತ್ರ   

ಬೆಳಗಾವಿ: ಇಲ್ಲಿನ ಕರ್ನಾಟಕ ಲಾ ಸೊಸೈಟಿಯ ಗೋಗಟೆ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಾಡಧ್ವಜ ಹಿಡಿದು ಕುಣಿದ ವಿದ್ಯಾರ್ಥಿಯ ಮೇಲೆ ಸಹಪಾಠಿಗಳು ಹಲ್ಲೆ ಮಾಡಿದ ಘಟನೆ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಕಾಲೇಜು ಸಮೀಪದ ಆರ್.ಪಿ.ಡಿ ವೃತ್ತದಲ್ಲಿ ಮೂರು ತಾಸು ಹೆದ್ದಾರಿ ಬಂದ್‌ ಮಾಡಿ ಧರಣಿ ಕುಳಿತರು. ಟೈರ್‌ಗೆ ಬೆಂಕಿ ಹಚ್ಚಿದರು. ಪೊಲೀಸರು, ಸ್ಥಳೀಯ ಜನಪ್ರತಿನಿಧಿಗಳು, ಎಂಇಎಸ್‌ ವಿರುದ್ಧ ಘೋಷಣೆ ಮೊಳಗಿಸಿದರು. ಈ ವೇಳೆ ಕಾಲೇಜಿಗೆ ನುಗ್ಗಲು ಯತ್ನಿಸಿದ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಧರಣಿಯಿಂದಾಗಿ ಗೋವಾ, ಖಾನಾಪುರ ಮಾರ್ಗದಲ್ಲಿ ಸಂಚರಿಸಬೇಕಾದ ಹಲವು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.

ADVERTISEMENT

ಕರವೇ ನಾರಾಯಣಗೌಡ ಬಣದ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್‌ ಗುಡಗನಟ್ಟಿ, ‘ಧ್ವಜ ಹಿಡಿದು ಕುಣಿದ ವಿದ್ಯಾರ್ಥಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ಅವನನ್ನು ಠಾಣೆಗೆ ಕರೆಯಿಸಿ ಹೊಡೆದಿದ್ದಾರೆ. ಕನ್ನಡ ಧ್ವಜಕ್ಕೂ ಅವಮಾನಕರ ಪದ ಬಳಸಿ ಬೈದಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಯೇ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾನೆ. ವಿದ್ಯಾರ್ಥಿ ಯನ್ನು ಠಾಣೆಗೆ ಕರೆಯಿಸಿ ಹೆದರಿಸಲಾ ಗಿದೆ. ಕೂಡಲೇ ಪೊಲೀಸ್‌ ಅಧಿಕಾರಿಗಳ ಮೇಲೆ ಕ್ರಮ ವಹಿಸಬೇಕು’ ಎಂದರು.

‘ಹಲ್ಲೆಕೋರರನ್ನು ಕಾಲೇಜಿನಿಂದ ಹೊರಹಾಕಬೇಕು, ಕರ್ನಾಟಕದಲ್ಲಿ ಶಿಕ್ಷಣ ಪಡೆಯಲು ಅವಕಾಶ ನೀಡ
ಬಾರದು, ಅಪ್ರಾಪ್ತರಾಗಿದ್ದರೆ ಕಾನೂನು ಸಂಘರ್ಷಕ್ಕೆ ಒಳಪಟ್ಟವರು ಎಂದು ಪ್ರಕರಣ ದಾಖಲಿಸಬೇಕು’ ಎಂದರು.

ಕಾಲೇಜಿಗೆ ಮುತ್ತಿಗೆ ಯತ್ನ: ಗೋಗಟೆ ಕಾಲೇಜಿಗೆ ಮುತ್ತಿಗೆ ಹಾಕಲು ಯತ್ನಿಸಿದ 15ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಇದರಿಂದ ಸ್ಥಳದಲ್ಲಿ ನೂಕಾಟ ತಳ್ಳಾಟ ಆರಂಭವಾಯಿತು. ಕೆಲವರು ಕಾಲೇಜಿನ ಮುಖ್ಯದ್ವಾರದ ಮೇಲೆ ಹತ್ತಿ ಕನ್ನಡ ಧ್ವಜ ಕಟ್ಟಿದರು. ಮತ್ತಿಬ್ಬರು ಪೊಲೀಸ್ ವಾಹನದ ಮೇಲೆಯೇ ಹತ್ತಿ ಧ್ವಜ ಹಾರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದರು.

ನಾರಾಯಣ ಗೌಡ ಬಣದ ಮುಖಂಡರಾದ ಮುಖಂಡರಾದ ಸುರೇಶ ಗವನ್ನವರ, ಸುಧೀರ ರೋಕಡೆ ಹಾಗೂ ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ಕೃಷ್ಣೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಈಶ್ವರಗೌಡ ಪಾಟೀಲ, ಉಪಾಧ್ಯಕ್ಷ ರಾಜು ಯರಗಾಣಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.