
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಯಕ್ಸಂಬಾದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಬೀರೇಶ್ವರ ಕೋ ಅಪ್ ಕ್ರೆಡಿಟ್ ಸೊಸೈಟಿ ಈಗ 35 ವರ್ಷಗಳನ್ನು ಪೂರೈಸಿದೆ.
₹4,857 ಕೋಟಿ ಠೇವಣಿ ಸಂಗ್ರಹ ಹೊಂದಿದ್ದು, ₹5 ಸಾವಿರ ಕೋಟಿ ಸಂಗ್ರಹಿಸುವತ್ತ ಮುನ್ನಡೆದಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದಲ್ಲಿ 231 ಶಾಖೆಗಳನ್ನು ಹೊಂದಿದೆ.
ಜೊಲ್ಲೆ ಗ್ರೂಪ್ ಸಂಸ್ಥಾಪಕ, ಮಾಜಿ ಸಂಸದರೂ ಆದ ಅಣ್ಣಾಸಾಹೇಬ ಜೊಲ್ಲೆ ಮತ್ತು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಯಕ್ಸಂಬಾ ಪಟ್ಟಣದ ಗ್ರಾಮದೇವತೆ ಬೀರೇಶ್ವರ ದೇವರ ಹೆಸರಿನಲ್ಲಿ 1991ರ ಜನವರಿ 11ರಂದು ಈ ಸಂಸ್ಥೆ ಸ್ಥಾಪಿಸಿದರು. ಇದೀಗ 4.31 ಲಕ್ಷ ಸದಸ್ಯರನ್ನು ಹೊಂದಿದ್ದು, ₹3,611 ಕೋಟಿ ಸಾಲ ವಿತರಿಸಿದೆ. ಕರ್ನಾಟಕದಲ್ಲಿ 178, ಮಹಾರಾಷ್ಟ್ರದಲ್ಲಿ 48 ಮತ್ತು ಗೋವಾದಲ್ಲಿ 5 ಶಾಖೆಗಳನ್ನು ಹೊಂದಿದೆ.
ಸಹಕಾರ, ಕೃಷಿ, ಹಣಕಾಸು, ಶಿಕ್ಷಣ, ಹೈನುಗಾರಿಕೆ, ವ್ಯಾಪಾರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಜೊಲ್ಲೆ ಗ್ರೂಪ್ ಕ್ರಿಯಾಶೀಲವಾಗಿದೆ. ಹಸಿರು ಶಕ್ತಿ ಉತ್ಪಾದನೆ, ಗ್ಲಾಸ್ ಪ್ರೊಸೆಸಿಂಗ್, ಕಟ್ಟಡ ನಿರ್ಮಾಣ, ಮನರಂಜನೆ, ಆರೋಗ್ಯ ಕ್ಷೇತ್ರದ ಸೌಕರ್ಯ, ಐಟಿಸಿ ಸಹಭಾಗಿತ್ವದಲ್ಲಿ ‘ವೆಲ್ಕಮ್’ ಎಂಬ ಫೈವ್ಸ್ಟಾರ್ ಹೋಟೆಲ್ ಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.