ADVERTISEMENT

ವಿವಿಧ ಮಹಾನಗರಕ್ಕೆ ವಿಮಾನಸೇವೆ ಒದಗಿಸಿ:ವಿಮಾನಯಾನ ಸಚಿವರಿಗೆ ಸಂಸದ ಶೆಟ್ಟರ್‌ ಮನವಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 1:41 IST
Last Updated 5 ಫೆಬ್ರುವರಿ 2026, 1:41 IST
ದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ ನಾಯ್ಡು ಅವರಿಗೆ ಸಂಸದ ಜಗದೀಶ ಶೆಟ್ಟರ್ ಮನವಿ ಕೊಟ್ಟರು
ದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ ನಾಯ್ಡು ಅವರಿಗೆ ಸಂಸದ ಜಗದೀಶ ಶೆಟ್ಟರ್ ಮನವಿ ಕೊಟ್ಟರು   

ಬೆಳಗಾವಿ: ‘ಬೆಳಗಾವಿ ವಿಮಾನ ನಿಲ್ದಾಣದಿಂದ ದೇಶದ ವಿವಿಧ ಮಹಾನಗರಗಳಿಗೆ ಇಂಡಿಗೊ ಮತ್ತು ಏ‌ರ್ ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆ ಮೂಲಕ ವಿಮಾನಸೇವೆ ಒದಗಿಸಬೇಕು’ ಎಂದು ಸಂಸದ ಜಗದೀಶ ಶೆಟ್ಟರ್ ಕೋರಿದರು.

ದೆಹಲಿಯಲ್ಲಿ ಮಂಗಳವಾರ ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ ನಾಯ್ಡು ಅವರನ್ನು ಭೇಟಿಯಾಗಿ ಚರ್ಚಿಸಿದರು.

‘ಬೆಳಗಾವಿ ವಿಮಾನ ನಿಲ್ದಾಣ ಕೇಂದ್ರದ ಉಡಾನ್‌ ಯೋಜನೆಯಡಿ ಆಯ್ಕೆಯಾಗಿತ್ತು. ಆದರೆ, ಯೋಜನೆ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಅನೇಕ ನಗರಗಳಿಗೆ ಈ ಹಿಂದೆ ಒದಗಿಸುತ್ತಿದ್ದ ಸೇವೆ ರದ್ದುಪಡಿಸಿವೆ. ಇದರಿಂದ ಪ್ರಯಾಣಿಕರಿಗೆ ಅದರಲ್ಲೂ ಉದ್ಯಮಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಹಾಗಾಗಿ ಬೆಳಗಾವಿಯಿಂದ ಮುಂಬೈ, ಚೆನ್ನೈ, ಸೂರತ್‌, ಪುಣೆ ಮತ್ತಿತರ ನಗರಗಳಿಗೆ ವಿಮಾನಸೇವೆ ಒದಗಿಸುವಂತೆ ಆಯಾ ಸಂಸ್ಥೆಗಳಿಗೆ ನಿರ್ದೇಶನ ಕೊಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ, ಹುಬ್ಬಳ್ಳಿ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಶಿವಮೊಗ್ಗ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹಾಗೂ ವಿಜಯಪುರ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರರ ಹೆಸರು ನಾಮಕರಣ ಮಾಡುವ ಕುರಿತ ಪ್ರಸ್ತಾವ ರಾಜ್ಯ ಸರ್ಕಾರದಿಂದ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಶೀಘ್ರ ಅದಕ್ಕೆ  ಅನುಮೋದನೆ ನೀಡಬೇಕು’ ಎಂದು ಕೋರಿದರು.

‘ನಮ್ಮ ಬೇಡಿಕೆಗಳಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.