ADVERTISEMENT

ಬೆಳಗಾವಿ ಬಾರ್‌ ಅಸೋಸಿಯೇಷನ್‌ನಿಂದ ಧರಣಿ, ಗೃಹ ಸಚಿವರ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 14:31 IST
Last Updated 19 ಜೂನ್ 2025, 14:31 IST
ವಕೀಲ ಸಂತೋಷ ಪಾಟೀಲ ಹತ್ಯೆ ಮಾಡಿದ ಹಾಗೂ ಸಿ.ಬಿ. ಗಿಡ್ಡನವರ ಮೇಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು
ವಕೀಲ ಸಂತೋಷ ಪಾಟೀಲ ಹತ್ಯೆ ಮಾಡಿದ ಹಾಗೂ ಸಿ.ಬಿ. ಗಿಡ್ಡನವರ ಮೇಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು   

ಬೆಳಗಾವಿ: ‘ವಕೀಲ ಸಂತೋಷ ಪಾಟೀಲ ಹತ್ಯೆ ಮಾಡಿದ ಹಾಗೂ ಗೋಕಾಕದ ವಕೀಲ ಸಿ.ಬಿ. ಗಿಡ್ಡನವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿ, ನಗರದಲ್ಲಿ ಗುರುವಾರ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಕೆಲ ಕಾಲ ಧರಣಿ ಮಾಡಿದ ವಕೀಲರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಬೆಳಿಗ್ಗೆಯಿಂದ ಹಲವರು ಕೋರ್ಟ್‌ ಕಾರ್ಯ ಕಲಾಪಗಳಿಂದ ದೂರು ಉಳಿದು ಪ್ರತಿಭಟನೆಗೆ ಬೆಂಬಲ ನೀಡಿದರು. ವಕೀಲರಿಗೆ ರಕ್ಷಣೆ ನೀಡದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಮೊಳಗಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇದರಿಂದಾಗಿಯೇ ಅಪರಾಧ ಸಂಖ್ಯೆಗಳು ಹೆಚ್ಚುತ್ತಿವೆ. ನ್ಯಾಯಕ್ಕಾಗಿ ಹೋರಾಡುವ ವಕೀಲರ ಮೇಲೆಯೇ ಪದೇಪದೇ ಹಲ್ಲೆಗಳು ನಡೆಯುತ್ತಿವೆ. ಈಗಾಗಲೇ ಕೆಲವರು ಹತ್ಯೆ ನಡೆದಿದೆ. ಆದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಿಸಲು ಕಠಿಣ ಕಾನೂನು ರೂಪಿಸಬೇಕು. ಈ ಬಗ್ಗೆ ಹಲವು ವರ್ಷಗಳಿಂದ ಆಗ್ರಹ ಮಾಡುತ್ತಿದ್ದರೂ ನಿರ್ಲಕ್ಷ್ಯ ಮಾಡಲಾಗಿದೆ’ ಎಂದು ಬಾರ್‌ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣನವರ ಕಿಡಿ ಕಾರಿದರು.

ADVERTISEMENT

‘ಯುವ ವಕೀಲ ಸಂತೋಷ ಪಾಟೀಲ ಅವರನ್ನು ಕೋರ್ಟ್‌ ಆವರಣದಿಂದಲೇ ಅಪಹರಣ ಮಾಡಿಕೊಂಡು ಹೋಗಿ ಹತ್ಯೆ ಮಾಡಲಾಗಿದೆ. ಇದಕ್ಕೆ ಸಾಕಷ್ಟು ಸಾಕ್ಷಿಗಳೂ ಸಿಕ್ಕಿವೆ. ಈ ಘಟನೆಯಿಂದ ವಕೀಲರಲ್ಲಿ ಆತಂಕದ ವಾತಾವರಣ ಉಂಟಾಗಿದೆ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕು’ ಎಂದೂ ಆಗ್ರಹಿಸಿದರು.

‘ಗೋಕಾಕ ನಗರದಲ್ಲಿ ವಕೀಲ ಸಿ.ಬಿ. ಗಿಡ್ಡನವರ ಹಾಗೂ ಅವರ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ವಕೀಲರು ದೂರು ನೀಡಿದ್ದು, ಅದಕ್ಕೆ ಪ್ರತಿಯಾಗಿ ಆರೋಪಿಗಳೂ ಜಾತಿ ನಿಂದನೆಯ ಪ್ರತಿದೂರು ದಾಖಲಿಸಿದ್ದಾರೆ. ಹಲ್ಲೇ ಮಾಡಿದವರೇ ದೂರು ನೀಡುವಾಗ ಪೊಲೀಸರು ಸೂಕ್ತ ಕ್ರಮ ವಹಿಸಬೇಕಿತ್ತು. ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಹಿಂಜರಿಯುತ್ತಿದ್ದಾರೆ’ ಎಂದೂ ಕಿಡಿ ಕಾರಿದರು.

‘ಈ ರೀತಿ ಪೊಲೀಸ್ ಇಲಾಖೆ ನಿರ್ಲಕ್ಷದಿಂದಾಗಿಯೇ ಹಲ್ಲೆ ಪ್ರಕರಣಗಳು ಮರುಕಳಿಸುತ್ತಿವೆ. ತಕ್ಷಣಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡರೆ ಇಂತಹ ಘಟನೆ ತಪ್ಪಿಸಬಹುದು. ಗೃಹಸಚಿವರು ಪೊಲೀಸರ ಮೇಲೆ ಒತ್ತಡ ಹಾಕದೆ ಸಂಪೂರ್ಣ ಅಧಿಕಾರ ಕೊಡಬೇಕು. ವಿಫಲವಾದ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಪ್ರಯತ್ನಿಸಬೇಕು’ ಎಂದೂ ಆಗ್ರಹಿಸಿದರು.

ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ಬಸವರಾಜ ಮುಗಳಿ, ಕಾರ್ಯದರ್ಶಿ ಡಿ.ಯಲ್ಲಪ್ಪ, ಜಂಟಿ ಕಾರ್ಯದರ್ಶಿ ಎಸ್.ವಿಶ್ವನಾಥ, ಸದಸ್ಯರಾದ ಎನ್.ಆರ್. ಲಾತೂರ, ವಿನೋದ ಪಾಟೀಲ, ಎ.ಸುಮಿತಕುಮಾರ, ಈರಣ್ಣ ಪೂಜಾರಿ, ಎನ್.ವಿನಾಯಕ. ಎನ್.ಸುರೇಶ, ಅನಿಲ ಪಾಟೀಲ, ಎಲ್‌.ಬಿ. ಚೌಗಲೆ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.