ADVERTISEMENT

ಬೆಳಗಾವಿಗೆ ಉತ್ತಮ ಭವಿಷ್ಯವಿದೆ: ಡಿ.ಕೆ.ಶಿವಕುಮಾರ್

ಚಳಿಯಲ್ಲೂ ಉತ್ಸಾಹ ಹೆಚ್ಚಿಸಿದ ‘ಸ್ವಚ್ಛತಾ ಓಟ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 23:33 IST
Last Updated 17 ಡಿಸೆಂಬರ್ 2025, 23:33 IST
ಬೆಳಗಾವಿಯ ಅಶೋಕ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಸ್ವಚ್ಛತಾ ಓಟಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ಕೊಟ್ಟರು.
ಪ್ರಜಾವಾಣಿ ಚಿತ್ರ
ಬೆಳಗಾವಿಯ ಅಶೋಕ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಸ್ವಚ್ಛತಾ ಓಟಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ಕೊಟ್ಟರು. ಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ ನಿರ್ದೇಶನಾಲಯ ಬುಧವಾರ ಇಲ್ಲಿ ಏರ್ಪಡಿಸಿದ್ದ ‘ಸ್ವಚ್ಛತಾ ಓಟ’ ಯಶಸ್ವಿಯಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ಐತಿಹಾಸಿಕ ಕೋಟೆ ಕೆರೆ, ಗಿಡ– ಮರ ಮತ್ತು ಪರಿಸರ ನೋಡಿದಾಗ, ಬೆಂಗಳೂರು ಮಹಾನಗರಕ್ಕಿಂತ ಬೆಳಗಾವಿಯೇ ಸುಂದರವಾಗಿದೆ ಅನ್ನಿಸುತ್ತದೆ’ ಎಂದರು.

‘ರಾಜ್ಯದ ಎರಡನೇ ರಾಜಧಾನಿ ಎಂಬಂತೆ ಇರುವ ಬೆಳಗಾವಿಗೆ ಉತ್ತಮ ಭವಿಷ್ಯವಿದೆ. ಇದರ ಅಭಿವೃದ್ಧಿಗೆ ಸರ್ಕಾರ ಕ್ರಮ ವಹಿಸಲಿದೆ. ದುಡಿಯುವ ಕೈಗಳಿಗೆ ಕೆಲಸ ಕೊಡಲಿದೆ’ ಎಂದರು.

ADVERTISEMENT

‘1924ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ಇಲ್ಲಿ ಐತಿಹಾಸಿಕ ಕಾಂಗ್ರೆಸ್‌ ಅಧಿವೇಶನ ನಡೆದಿತ್ತು. ಕಳೆದ ವರ್ಷ ಅದರ ಶತಮಾನೋತ್ಸವ ಆಚರಿಸಿದ್ದು, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದೇ ಉದ್ದೇಶವಾಗಿತ್ತು’ ಎಂದರು.

ನಗರಾಭಿವೃದ್ಧಿ ಸಚಿವ ಬೈರತಿ‌ ಸುರೇಶ, ‘ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ರಾಜ್ಯದ ಕೆಲ ನಗರಗಳು ಸ್ಥಾನ ಪಡೆದಿವೆ. ಮುಂದಿನ ದಿನಗಳಲ್ಲಿ ಬೆಳಗಾವಿ ಮಹಾನಗರವೂ ಈ ಪಟ್ಟಿ ಸೇರಲಿ’ ಎಂದರು.

ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಆಸಿಫ್ ಸೇಠ್, ಉಪ ಮೇಯರ್‌ ವಾಣಿ ಜೋಶಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್‌ ಇತರರಿದ್ದರು.

ಪ್ರಮಾಣಪತ್ರ ವಿತರಣೆ: ಪ್ರಮುಖ ರಸ್ತೆಗಳಲ್ಲಿ ಸಾಗಿದ ಓಟ, ಕೋಟೆ ಕೆರೆ ಆವರಣ ತಲುಪಿತು. ಚಳಿಯಲ್ಲೂ ವಿವಿಧ ವಯೋಮಾನದವರು ಉತ್ಸಾಹದಿಂದ ಪಾಲ್ಗೊಂಡು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳು ಹೆಜ್ಜೆಹಾಕಿದರು. ಓಟದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ನೀಡಲಾಯಿತು.

ಸ್ವಚ್ಛತೆಯೇ ದೇವರು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಇಡೀ ನಗರ ಸ್ವಚ್ಛವಾಗಿ ಇರಬೇಕೆಂದರೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ
ಬೈರತಿ‌ ಸುರೇಶ ನಗರಾಭಿವೃದ್ಧಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.