ಬೆಳಗಾವಿ: ಇಲ್ಲಿನ ಸದಾಶಿವ ನಗರದ ರಸ್ತೆಯಲ್ಲಿ ಮೇವಿಗಾಗಿ ಪರದಾಡುತ್ತಿದ್ದ ಬಿಡಾಡಿ ದನಗಳ ಹಿಂಡಿಗೆ ಅಕ್ಕಿ, ಜೋಳವನ್ನು ಹಾಕಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾನವೀಯತೆ ಮೆರೆದರು.
ಲಾಕ್ ಡೌನ್ ಘೋಷಣೆ ಆದಾಗಿನಿಂದಲೂ ನಿತ್ಯ ಒಂದಿಲ್ಲೊಂದು ಬಡಾವಣೆಯಲ್ಲಿ ಬಡವರಿಗೆ ಆಹಾರ ಧಾನ್ಯ ನೀಡಿ ನೆರವಾಗುತ್ತಿರುವ ಅವರು, ಗುರುವಾರ ಬಿಡಾಡಿ ದನಗಳಿಗೆ ಮಿಡಿದಿದ್ದಾರೆ.
ಒಂದಿಪ್ಪತ್ತು ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ಜೋಳ ಹಾಗೂ ಅಕ್ಕಿ ಕಾರಲ್ಲಿತ್ತು. ಬಿಡಾಡಿ ದನಗಳ ಕಷ್ಟ ನೋಡಲಾಗದೆ ಅವುಗಳಿಗೆ ಹಾಕಿದೆವು. ನನ್ನೊಂದಿಗೆ ಪ್ರಾಣಿ ದಯಾ ಸಂಘದ ರೋಹನ್ ರಜಪೂತ, ಹರೀಶ ನೆರವಾದರು. ಮಾರ್ಚ್ 20ರಿಂದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯಿಂದ ಆರಂಭಿಸಿರುವ ಹಸಿದವರತ್ತ ನಮ್ಮ ಚಿತ್ತ ಅಭಿಯಾನ ಸಾರ್ಥಕ ಎನಿಸಿತು. ಮೇವಿಲ್ಲದೆ ಕಂಗಾಲಾಗಿದ್ದ ದನ ಕರುಗಳಿಗೆ ನೆರವಾದ ತೃಪ್ತಿ ನಮ್ಮದು ಎಂದು ಚಂದರಗಿ ತಿಳಿಸಿದರು.
ನಾವು ಬಡ ಜನರಿಗೆ ಹಂಚಲು ಅಕ್ಕಿ, ಜೋಳ ಒಯ್ಯುತ್ತಿದ್ದೆವು. ಆದರೆ ಅದು ಮಾರ್ಗ ಮಧ್ಯದಲ್ಲಿ ದನಗಳ ಪಾಲಾಯಿತು. ಇದಕ್ಕೇ ಇರಬೇಕು, ಪ್ರತಿ ಕಾಳಿನ ಮೇಲೂ ತಿನ್ನುವವರ ಹೆಸರು ಬರೆದಿರುತ್ತದೆ ಎಂದು ಹೇಳುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.