ಬೆಳಗಾವಿ: ಇಲ್ಲಿನ ಕ್ಯಾಂಪ್ ಪ್ರದೇಶದ ಮೀನು ಮಾರುಕಟ್ಟೆ ರಸ್ತೆಯಲ್ಲಿ ಬುಧವಾರ ಶಾಲೆಗೆ ಹೊರಟಿದ್ದ ವಿದ್ಯಾರ್ಥಿಗಳ ಮೇಲೆ ಲಾರಿ ಹರಿದು, ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅರ್ಹಾನ್ ಬೇಪಾರಿ (10) ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಈತನ ಅಕ್ಕ ಅತಿಕಾ ಹಾಗೂ ಇನ್ನೊಬ್ಬ ವಿದ್ಯಾರ್ಥಿ ಆಯುಷ್ಯಗೆ ಗಂಭೀರ ಗಾಯಗಳಾಗಿವೆ.
ಘಟನೆ ಕಂಡು ಉದ್ರಿಕ್ತ ಜನ ಲಾರಿ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಜನ ಆಕ್ರೋಶ ವ್ಯಕ್ತಪಡಿಸಿದರು.
ಎರಡು ದಿನಗಳ ಹಿಂದಷ್ಟೇ ಕೋಟೆ ರಸ್ತೆಯಲ್ಲಿ ಲಾರಿ ಹರಿದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಭೀಭತ್ಸ ಘಟನೆಯ ನೆನಪು ಮಾಸುವ ಮುನ್ನವೇ ಲಾರಿಗಳ ಉಪಟಳಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿಯಾಗಿದ್ದಾನೆ.
ಘಟನೆ ವಿವರ: ಬೆಳಗಾವಿಯ ಕ್ಯಾಂಪ್ ಪ್ರದೇಶದ ವೆಲ್ಕಮ್ ಹೋಟೆಲ್ ಮುಂದೆ ವಿದ್ಯಾರ್ಥಿಗಳು ರಸ್ತೆ ದಾಟುತ್ತಿದ್ದರು.
ಅತಿಕಾ ಅವರು ಕಿರಿಯ ಸಹೋದರ ಅರ್ಹಾನ್ನನ್ನು ಸ್ಕೂಟರಿನಲ್ಲಿ ಶಾಲೆಗೆ ಬಿಡಲು ಹೊರಟಿದ್ದರು. ರಸ್ತೆ ದಾಟುವ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿ ಸ್ಕೂಟರಿಗೆ ಡಿಕ್ಕಿ ಹೊಡೆಯಿತು. ರಸ್ತೆ ಮೇಲೆ ಬಿದ್ದ ಅರ್ಹಾನ್ ಮೇಲೆ ಲಾರಿ ಚಕ್ರಗಳು ಹರಿದವು. ಕೂದಲೆಳೆ ಅಂತದರಲ್ಲೇ ಬಿದ್ದ ಅತಿಕಾ ಅವರಿಗೂ ಲಾರಿ ಚಕ್ರಗಳು ತಾಗಿದವು.
ಈ ವೇಳೆ ಲಾರಿ ಚಾಲಕ ವಾಹನವನ್ನು ಪಕ್ಕಕ್ಕೆ ಓಡಿಸಿದ್ದರಿಂದ ರಸ್ತೆ ಪಕ್ಕದಲ್ಲಿ ನಡೆದು ಹೊರಟಿದ್ದ ಆಯುಷ್ಗೂ ಗುದ್ದಿತು.
ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.
ಡಿಸಿಪಿ ಪಿ.ವಿ ಸ್ನೇಹಾ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.