ADVERTISEMENT

ಬೆಳಗಾವಿ | ಕುಂದಾನಗರಿಯಲ್ಲಿ ಸಂಗೀತ ವೈಭವ

ಮೋಡಿ ಮಾಡಿದ ವಿಜಯಪ್ರಕಾಶ್‌, ಅನುರಾಧ ಭಟ್‌ ಜೋಡಿ, ಕುಣಿದು ಕುಪ್ಪಳಿಸಿದ ಯುವಸಮೂಹ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:22 IST
Last Updated 25 ಫೆಬ್ರುವರಿ 2026, 6:22 IST
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ಕನ್ನಡ ಹಬ್ಬ’ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್‌ ಹಾಡಿ ಜನರನ್ನು ರಂಜಿಸಿದರು
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ಕನ್ನಡ ಹಬ್ಬ’ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್‌ ಹಾಡಿ ಜನರನ್ನು ರಂಜಿಸಿದರು   

ಬೆಳಗಾವಿ: ಗಡಿನಾಡಿನ ರಾಜ್ಯೋತ್ಸವಕ್ಕಾಗಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಿದ ₹50 ಲಕ್ಷ ಅನುದಾನದಲ್ಲಿ ಅದ್ದೂರಿ ಸಂಗೀತ ವೈಭವ ನಡೆಯಿತು.

ಮಂಗಳವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನರ ಮಧ್ಯೆ ಖ್ಯಾತ ಹಿನ್ನೆಲೆ ಗಾಯಕರಾದ ವಿಜಯಪ್ರಕಾಶ್‌, ಅನುರಾಧ ಭಟ್‌ ಅವರು ಕನ್ನಡಿಗರ ನೆಚ್ಚಿನ ಗೀತೆಗಳನ್ನು ಹಾಡಿ ರಂಜಿಸಿದರು.

ವರ್ಣರಂಜಿತ ವೇದಿಕೆಯಿಂದ ಒಂದಾದ ಮೇಲೊಂದರಂತೆ ಚಿತ್ರಗೀತೆಗಳು, ಸುಮಧುರ ಯುಗಳ ಗೀತೆಗಳು, ಜನಪದ ಗೀತೆಗಳು ಹಾಗೂ ಕನ್ನಡ ನಾಡು–ನುಡಿಯ ವೈಭವ ಸಾರುವ ಗೀತೆಗಳು ಮೂಡಿಬಂದವು. ಕಲಾವಿದರ ತಂಡ ಖುಷಿಯಿಂದ ನೃತ್ಯ ಮಾಡಿ, ಯುವಪಡೆ ರಂಜಿಸಿತು.

ADVERTISEMENT

ಇತ್ತ ವೇದಿಕೆ ಮುಂಭಾಗದಲ್ಲಿ ಯುವಜನರು ಕುಣಿದು ಕುಪ್ಪಳಿಸಿದರು. ವಿಜಯಪ್ರಕಾಶ್‌ ತಂಡದವರು ಇಳಿಸಂಜೆಯಲ್ಲಿ ಸಂಗೀತದ ರಸದೌತಣ ಉಣಬಡಿಸಿದರು.

ದಶಕಗಳ ಹೋರಾಟದ ಬಳಿಕ ಕನ್ನಡ ಸಂಘಟನೆಗಳ ಕೋರಿಕೆ ಮೇರೆಗೆ, ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ₹50 ಲಕ್ಷ ಅನುದಾನವನ್ನು ಪ್ರತ್ಯೇಕವಾಗಿ ಬೆಳಗಾವಿಯ ರಾಜ್ಯೋತ್ಸವಕ್ಕೆ ಬಿಡುಗಡೆ ಮಾಡಿದ್ದರು. ಈ ಅನುದಾನ ರಾಜ್ಯೋತ್ಸವ ಹೊಸ್ತಿಲಲ್ಲೇ ಬಿಡುಗಡೆಯಾದ ಕಾರಣ, ಆಗ ಬಳಕೆಯಾಗಿರಲಿಲ್ಲ. ಈಗ ಅದೇ ಅನುದಾನದಲ್ಲಿ ಸಾಂಸ್ಕೃತಿಕ ರಸದೌತಣದ ಉಣಬಡಿಸಿ, ಯುವ ಮನಸ್ಸುಗಳನ್ನು ರಂಜಿಸಲಾಯಿತು.

ಮೂರೂವರೆ ತಿಂಗಳ ಬಳಿಕವೂ ರಾಜ್ಯೋತ್ಸವದ ವಾತಾವರಣ ಕಳೆಗಟ್ಟಿತು. ತುಂತುರು ಮಳೆ ಇದ್ದರೂ ಅಪಾರ ಸಂಖ್ಯೆಯ ಜನ ಸೇರಿ ಸಂಭ್ರಮಿಸಿದರು.

ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ‘ಕನ್ನಡ ಹಬ್ಬ’ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಅನುರಾಧ ಭಟ್‌ ಹಾಡಿನ ಮೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.